ನವದೆಹಲಿ: ಒಂದೆಡೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯ ಸ್ವಂತ ರಾಜಕೀಯ ಬಲವು ಹಿಂದೆಂದಿಗಿಂತಲೂ ಏರಿಕೆಯಾಗಿದ್ದರೆ, ಮತ್ತೊಂದೆಡೆ ಕಳೆದ ಒಂದು ವರ್ಷದಲ್ಲಿ ತನ್ನ ಎರಡು ವಿಶ್ವಾಸಾರ್ಹ ಹಾಗೂ ಸೈದ್ಧಾಂತಿಕವಾಗಿ ಜೊತೆಗಿದ್ದ ಎರಡು ಮಿತ್ರಪಕ್ಷಗಳನ್ನು ಬಿಜೆಪಿ ಕಳೆದುಕೊಂಡಿದೆ.
ಎರಡೂವರೆ ದಶಕಗಳ ಕಾಲ ಜೊತೆಗಿದ್ದು,ಎನ್ಡಿಎ ಮೈತ್ರಿಕೂಟದಿಂದ ಶಿರೋಮಣಿ ಅಕಾಲಿ ದಳವು(ಎಸ್ಎಡಿ) ಹೊರನಡೆದಿದೆ. ಇದು ಮೋದಿ ನೇತೃತ್ವದ ಸರ್ಕಾರಕ್ಕೆ ಹೆಚ್ಚಿನ ಪರಿಣಾಮ ಬೀರದೇ ಇದ್ದರೂ, ಪಂಜಾಬ್ನಲ್ಲಿ ಬಿಜೆಪಿಗೆ ರಾಜಕೀಯ ನಿರ್ವಾತ ಸೃಷ್ಟಿಯಾಗಲಿದೆ. ಪಂಜಾಬ್ನಲ್ಲಿ ಎಸ್ಎಡಿ ನಾಯಕ ಸುಖ್ಬೀರ್ ಸಿಂಗ್ ಬಾದಲ್ ವಿರುದ್ಧವಿರುವ ಅಕಾಲಿಗಳನ್ನು ಒಗ್ಗೂಡಿಸಿ ಪ್ರತ್ಯೇಕ ಪಕ್ಷ ರಚನೆಗೆ ಬಿಜೆಪಿ ಪ್ರಯತ್ನಿಸಬಹುದು ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ. ಆದರೆ,ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಕೇಂದ್ರದ ಮಸೂದೆಗಳನ್ನು ವಿರೋಧಿಸಿ ಪಂಜಾಬ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಬಿಜೆಪಿಯ ಪ್ರಯತ್ನಕ್ಕೆ ಅಡ್ಡಿಯಾಗಲಿವೆ ಎನ್ನಲಾಗಿದೆ.
ಮುಖ್ಯಮಂತ್ರಿ ಸ್ಥಾನದ ಹಂಚಿಕೆ ವಿಚಾರದಲ್ಲಿಪಕ್ಷದ ಬೇಡಿಕೆ ಈಡೇರದೇ ಇದ್ದಾಗ, ಮಹಾರಾಷ್ಟ್ರದಲ್ಲಿ ಶಿವಸೇನಾಎನ್ಡಿಎಯಿಂದ ಹೊರಬಂದಿತ್ತು. ನಂತರದಲ್ಲಿ ಎನ್ಸಿಪಿ ಹಾಗೂ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದ ಶಿವಸೇನಾ, ಮೈತ್ರಿ ಸರ್ಕಾರ ರಚಿಸಿತ್ತು. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಕಳೆದ ವರ್ಷ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ‘ತೆಲುಗು ದೇಶಂ ಪಾರ್ಟಿ’(ಟಿಡಿಪಿ) ಎನ್ಡಿಎ ಮೈತ್ರಿಕೂಟ ತೊರೆದಿತ್ತು.
‘ಶಿವಸೇನಾಗೆ ಮುಖ್ಯಮಂತ್ರಿ ಸ್ಥಾನದ ಭರವಸೆಯನ್ನು ಬಿಜೆಪಿ ನೀಡಿರಲಿಲ್ಲ, ಕೃಷಿ ಕ್ಷೇತ್ರದ ಸುಧಾರಣೆಯ ಸಿದ್ಧಾಂತದಿಂದ ಹಿಂದಕ್ಕೆ ಹೆಜ್ಜೆ ಇಡಲು ಬಿಜೆಪಿಗೆ ಸಾಧ್ಯವಿಲ್ಲ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.
ಎರಡೂ ಪಕ್ಷದ ಈ ನಡೆಯಿಂದಾಗಿ, ಪ್ರಸ್ತುತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವು ಅತಿ ಹೆಚ್ಚು ಕಾಲ ಎನ್ಡಿಎ ಜೊತೆ ಮೈತ್ರಿ ಹೊಂದಿರುವ ಪಕ್ಷವಾಗಿ ಗುರುತಿಸಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.