ಇಂದೋರ್: ಹಲ್ಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಇಂದೋರ್ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗೀಯ ಅವರು ಜಾಮೀನಿನ ಮೇಲೆ ಬಿಡುಗಡೆಯಾದ ವೇಳೆ ಅವರ ಬೆಂಬಲಿಗರು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದ ವಿಡಿಯೊ ವೈರಲ್ ಆಗಿದೆ. ಈ ಸಂಬಂಧ ಎಫ್ಐಆರ್ ದಾಖಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗೂ ಪಕ್ಷದ ಕಾರ್ಯಕರ್ತರಿಗೂ ಸಂಬಂಧವಿಲ್ಲ ಎಂದು ಬಿಜೆಪಿಯ ಮಾಧ್ಯಮ ಘಟಕದ ಉಸ್ತುವಾರಿ ದೇವಕಿನಂದನ್ ತಿವಾರಿ ಸ್ಪಷ್ಟಪಡಿಸಿದ್ದಾರೆ.
ವಿಡಿಯೊದಲ್ಲಿ ಏನಿದೆ: ಬಿಜೆಪಿ ಕಚೇರಿಗೆ ಸಮೀಪದಲ್ಲಿರುವ ಎ.ಬಿ. ರಸ್ತೆಯ ಕಟ್ಟಡದಲ್ಲಿ ಆಕಾಶ್ ಕಚೇರಿ ಇದೆ. ಒಂದಿಷ್ಟು ಜನರು ಕಚೇರಿ ಎದುರುಡೋಲು ಬಾರಿಸಿ ನೃತ್ಯ ಮಾಡಿ ಸಂಭ್ರಮಿಸುತ್ತಿದ್ದರು. ಇದೇ ವೇಳೆ ವ್ಯಕ್ತಿಯೊಬ್ಬರು ತಮ್ಮ ಪಿಸ್ತೂಲಿನಿಂದ ಗಾಳಿಯಲ್ಲಿ ಐದು ಬಾರಿ ಗುಂಡು ಹಾರಿಸಿದ ದೃಶ್ಯ ಈ ವಿಡಿಯೊದಲ್ಲಿ ದಾಖಲಾಗಿದೆ.
ಕ್ರಿಮಿನಲ್ ಕೇಸ್ಗೆ ಪಟ್ಟು: ಬಿಜೆಪಿ ಶಾಸಕರ ಕಚೇರಿ ಎದುರು ಗುಂಡು ಹಾರಿಸುವ ಸಂಭ್ರಮಾಚರಣೆಯಲ್ಲಿ
ಭಾಗಿಯಾದ ಎಲ್ಲರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಕಾಂಗ್ರೆಸ್ ವಕ್ತಾರ ನೀಲಭ್ ಶುಕ್ಲಾ ಒತ್ತಾಯಿಸಿದ್ದಾರೆ.
ಒತ್ತುವರಿ ತೆರವು ಮಾಡಲು ಬಂದಿದ್ದ ಪುರಸಭೆ ಅಧಿಕಾರಿಯನ್ನು ಕೈಲಾಶ್ ಅವರು ಕ್ರಿಕೆಟ್ ಬ್ಯಾಟ್ನಿಂದ ಥಳಿಸಿ ಜೈಲು ಸೇರಿದ್ದರು. ಭೋಪಾಲ್ ವಿಶೇಷ ಕೋರ್ಟ್ ಜಾಮೀನು ನೀಡಿತ್ತು. ಭಾನುವಾರ ಬೆಳಿಗ್ಗೆ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು.
***
ಜಮೀನು ಅರಣ್ಯ ಇಲಾಖೆಗೆ ಸೇರಿದ್ದು. ಇದನ್ನು ಶಾಸಕರ ಗಮನಕ್ಕೂ ತರಲಾಗಿತ್ತು. ಹಲ್ಲೆ ಘಟನೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ
–ಪಿ.ಕೆ. ಝಾ, ತೆಲಂಗಾಣದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಜನರು ಸೇರಿರುವ ಸಾರ್ವಜನಿಕ ಪ್ರದೇಶದಲ್ಲಿ ಗುಂಡು ಹಾರಿಸುವುದು ಅಪರಾಧ. ಅದನ್ನು ಉಲ್ಲಂಘಿಸಿದ ವ್ಯಕ್ತಿಯನ್ನು ಬಂಧಿಸಬೇಕು
–ನೀಲಭ್ ಶುಕ್ಲಾ, ಕಾಂಗ್ರೆಸ್ ವಕ್ತಾರ
ಬಹುಶಃ ಇದು ಹಳೆಯ ವಿಡಿಯೊ ಇರಬೇಕು. ಭಾನುವಾರ ಇದನ್ನು ಚಿತ್ರೀಕರಿಸಿಲ್ಲ. ಆದರೂ ಇದನ್ನು ಪರಿಶೀಲಿಸುತ್ತಿದ್ದೇವೆ
–ಸುಬೋಧ್ ಶ್ರೋತಿಯಾ, ಪೊಲೀಸ್ ಅಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.