ನವದೆಹಲಿ: ರಾಷ್ಟ್ರಪಿತನ ಜನ್ಮ ದಿನಾಚರಣೆಯಂದು ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸುವವರ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ. ಬೇಜವಾಬ್ದಾರಿಯಿಂದ ಹೇಳಿಕೆ ನೀಡುವ ಮೂಲಕ ದೇಶವನ್ನು ನಾಚಿಕೆಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
'ಭಾರತವು ಯಾವಾಗಲೂ ಆಧ್ಯಾತ್ಮಿಕದ ಮಹಾಶಕ್ತಿಯಾಗಿದೆ, ಆದರೆ ಮಹಾತ್ಮರು ತಮ್ಮ ಅಸ್ತಿತ್ವದ ಮೂಲಕ ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಶಕ್ತಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟರು ಮತ್ತು ನಮಗೆ ನೈತಿಕತೆಯನ್ನು ಭೋದಿಸಿರುವುದು ಇಂದಿಗೂ ನಮ್ಮ ದೊಡ್ಡ ಶಕ್ತಿಯಾಗಿ ಉಳಿದಿದೆ. 'ಗೋಡ್ಸೆ ಜಿಂದಾಬಾದ್' ಎಂದು ಟ್ವೀಟ್ ಮಾಡಿರುವುದು ಬೇಜವಾಬ್ದಾರಿಯಿಂದ ಕೂಡಿದ್ದು, ರಾಷ್ಟ್ರವನ್ನು ಅವಮಾನಿಸುತ್ತಿದೆ' ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಮಹಾತ್ಮಾ ಗಾಂಧಿಯವರ ಜನ್ಮದಿನದ ಅಂಗವಾಗಿ ಟ್ವಿಟರ್ನಲ್ಲಿ 'ನಾಥೂರಾಮ್ ಗೋಡ್ಸೆ ಜಿಂದಾಬಾದ್' ಎಂಬುದು ಟ್ರೆಂಡ್ ಆದ ಬೆನ್ನಲ್ಲೇ ಲೋಕಸಭಾ ಸಂಸದರು ಅಂತವರ ವಿರುದ್ಧ ಕಿಡಿಕಾರಿದ್ದಾರೆ.
ಬಲಪಂಥೀಯರ ಒಂದು ವಿಭಾಗವು ಮಹಾತ್ಮ ಗಾಂಧಿಯವರನ್ನು ಜನವರಿ 30, 1948 ರಂದು ಗುಂಡಿಟ್ಟು ಕೊಂದ ವ್ಯಕ್ತಿಯನ್ನು ಹೊಗಳುವ ಕಮೆಂಟ್ಗಳನ್ನು ಪೋಸ್ಟ್ ಮಾಡುತ್ತಿತ್ತು. ಹೀಗಾಗಿ 'ನಾಥೂರಾಮ್ ಗೋಡ್ಸೆ ಜಿಂದಾಬಾದ್' ಟ್ವಿಟರ್ನಲ್ಲಿ ಟ್ರೆಂಡ್ ಆಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.