ADVERTISEMENT

ಗುಜರಾತ್ ಗಲಭೆಗೆ ಬಿಜೆಪಿ ಕ್ಷಮೆ ಕೋರಲಿ: ಎನ್‌ಸಿಪಿ

ಪಿಟಿಐ
Published 3 ಮಾರ್ಚ್ 2021, 11:58 IST
Last Updated 3 ಮಾರ್ಚ್ 2021, 11:58 IST
ನವಾಬ್ ಮಲ್ಲಿಕ್
ನವಾಬ್ ಮಲ್ಲಿಕ್   

ಮುಂಬೈ: ‘ನಾಲ್ಕು ದಶಕಗಳ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಪ್ರಮಾದ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ ರೀತಿಯಲ್ಲೇ, ಎರಡು ದಶಕಗಳ ಹಿಂದೆ ಗುಜರಾತಿನಲ್ಲಿ ನಡೆದ ಗಲಭೆಯ ಕುರಿತಾಗಿ ಬಿಜೆಪಿ ಕ್ಷಮೆ ಯಾಚಿಸಬೇಕು’ ಎಂದು ಬುಧವಾರ ಎನ್‌ಸಿಪಿ ಹೇಳಿದೆ.

‘45 ವರ್ಷಗಳ ಬಳಿಕ ತುರ್ತು ಪರಿಸ್ಥಿತಿ ಹೇರಿದ್ದು ತಪ್ಪು ಎಂದು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ 1984ರ ಸಿಖ್ ವಿರೋಧಿ ದಂಗೆಯ ಬಗ್ಗೆಯೂ ಕಾಂಗ್ರೆಸ್ ಕ್ಷಮೆಯಾಚಿಸಿದೆ. ಈಗ ಬಿಜೆಪಿಯ ಸರದಿ. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ದಂಗೆಯ ಕುರಿತು ತಪ್ಪೊಪ್ಪಿಕೊಳ್ಳಬೇಕು’ ಎಂದು ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿಯ ವಕ್ತಾರ ನವಾಬ್ ಮಲ್ಲಿಕ್ ಹೇಳಿದರು.

‘ಹಳೆಯ ತಪ್ಪಿಗಾಗಿ ರಾಹುಲ್ ಗಾಂಧಿ ಅವರು ಕ್ಷಮೆ ಕೋರಿರುವುದರಲ್ಲಿ ಯಾವುದೇ ತಪ್ಪಿಲ್ಲ. ಗುಜರಾತ್ ಗಲಭೆಯು ಮಾನವೀಯತೆಯ ಮೇಲೆಯೇ ಕಳಂಕವನ್ನುಂಟು ಮಾಡಿತ್ತು. ರಾಹುಲ್ ರೀತಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಕ್ಷಮೆ ಯಾಚಿಸುವುದೇ’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ಅವರು ಪ್ರಶ್ನಿಸಿದ್ದಾರೆ.

ADVERTISEMENT

ಕಾಂಗ್ರೆಸ್ ಮತ್ತು ಎನ್‌ಸಿಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಬಿಜೆಪಿ ವಕ್ತಾರ ಕೇಶವ ಉಪಾಧ್ಯೆ, ‘ಜನರ ಭಾವನೆಗಳಿಗೆ ಬೆಲೆ ಕೊಡದೇ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿತ್ತು. ಆದರೆ, ಗುಜರಾತ್ ದಂಗೆಯು ಅದಕ್ಕಿಂತ ಭಿನ್ನ. ತುರ್ತು ಪರಿಸ್ಥಿತಿ ಮತ್ತು ಗುಜರಾತ್ ದಂಗೆಯನ್ನು ಪರಸ್ಪರ ಹೋಲಿಸಲಾಗದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.