ನವದೆಹಲಿ: ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಅವರು ಬಿಜೆಪಿ ಧಾಟಿಯಲ್ಲೇ ಮಾತನಾಡುತ್ತಿದ್ದು, ಅವರನ್ನು ಕೇಸರಿ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವ್ಯಂಗ್ಯ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್ ಅವರನ್ನು ಬಿಜೆಪಿ ತನ್ನ ಪಕ್ಷದ ಸ್ಟಾರ್ ಕ್ಯಾಂಪೇನರ್ ಆಗಿಸಿಕೊಂಡಿದೆ ಎಂದು ಹೇಳಿದ್ದಾರೆ.
‘ಬಿಜೆಪಿ ನನಗೆ ಸುಳ್ಳು ಪತ್ತೆ ಪರೀಕ್ಷೆ ಮಾಡಿಸಬೇಕೆಂದು ಒತ್ತಾಯಿಸಿತ್ತು. ಸುಕೇಶ್ ಚಂದ್ರಶೇಖರ್ ಸಹ ಅದೇ ಬೇಡಿಕೆ ಇಟ್ಟಿದ್ದಾರೆ. ಬಿಜೆಪಿ ಮತ್ತು ಸುಕೇಶ್ ಒಂದೇ ಧಾಟಿಯಲ್ಲಿ ಮಾತನಾಡುತ್ತಿದ್ದು, ಸುಕೇಶ್ ಅವರನ್ನು ಬಿಜೆಪಿ ಸೇರ್ಪಡೆಗೆ ಸಂಪೂರ್ಣ ತರಬೇತಿ ನೀಡಲಾಗಿದೆ’ಎಂದು ಕುಟುಕಿದ್ದಾರೆ.
‘ಮೋದಿಜೀ ಅವರ ರೋಡ್ ಶೋಗಳಲ್ಲಿ ಜನ ಸೇರುತ್ತಿಲ್ಲ ಎಂಬ ಬಗ್ಗೆ ಕೇಳಿದ್ದೇನೆ. ಸುಕೇಶ್ ಚಂದ್ರಶೇಖರ್ ಅವರನ್ನು ಅಲ್ಲಿಗೆ ಕರೆದೊಯ್ದರೆ, ತಮ್ಮ ವಂಚನೆ ಕುರಿತಾದ ಬಗೆ ಬಗೆಯ ಕಥೆಗಳನ್ನು ಹೇಳಿ ಜನ ಸೇರುವಂತೆ ಮಾಡುತ್ತಾರೆ. ಅವರನ್ನೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಗಾದಿಗೆ ನೇಮಕ ಮಾಡಬೇಕು’ ಎಂದು ಕೇಜ್ರಿವಾಲ್ ವ್ಯಂಗ್ಯ ಮಾಡಿದ್ಧಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.