ADVERTISEMENT

ನೂಪುರ್‌ ಶರ್ಮಾ ಬಿಜೆಪಿಯಿಂದ ಅಮಾನತು, ನವೀನ್ ಕುಮಾರ್ ಜಿಂದಾಲ್ ಉಚ್ಚಾಟನೆ

ಪಿಟಿಐ
Published 5 ಜೂನ್ 2022, 18:22 IST
Last Updated 5 ಜೂನ್ 2022, 18:22 IST
ನೂಪುರ್‌ ಶರ್ಮಾ (ಚಿತ್ರ ಕೃಪೆ – ನೂಪುರ್‌ ಶರ್ಮಾ ಅವರ ಟ್ವಿಟರ್ ಖಾತೆ)
ನೂಪುರ್‌ ಶರ್ಮಾ (ಚಿತ್ರ ಕೃಪೆ – ನೂಪುರ್‌ ಶರ್ಮಾ ಅವರ ಟ್ವಿಟರ್ ಖಾತೆ)   

ನವದೆಹಲಿ: ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಭಾನುವಾರ ಅಮಾನತು ಮಾಡಲಾಗಿದೆ.

ಅರಬ್ ರಾಷ್ಟ್ರಗಳಿಂದ ಮತ್ತು ಟ್ವಿಟರ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಜೆಪಿ ಈ ಕ್ರಮ ಕೈಗೊಂಡಿದೆ.

ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನೂ ಪಕ್ಷದಿಂದ ಉಚ್ಚಾಟಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಕೋಮು ಸೌಹಾರ್ದಕ್ಕೆ ಧಕ್ಕೆ ತರುವುದಲ್ಲದೆ, ಪಕ್ಷದ ಸಂವಿಧಾನಕ್ಕೂ ವಿರುದ್ಧವಾಗಿದೆ ಎಂದು ಬಿಜೆಪಿ ಹೇಳಿದೆ.

ADVERTISEMENT

ಕತಾರ್ ಮತ್ತು ಕುವೈತ್‌ನ ವಿದೇಶಾಂಗ ಸಚಿವಾಲಯಗಳು ಭಾರತದ ರಾಯಭಾರಿಗಳನ್ನು ಕರೆಸಿ ಖಂಡನಾ ನಿರ್ಣಯದ ಅಧಿಕೃತ ಟಿಪ್ಪಣಿಯನ್ನು ಅವರಿಗೆ ಹಸ್ತಾಂತರಿ ಸಿವೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಕತಾರ್‌ ಭೇಟಿ ವೇಳೆ ಈ ಬೆಳವಣಿಗೆ ನಡೆದಿದೆ. ಭಾರತದ ಉತ್ಪನ್ನಗಳನ್ನು ಖರೀದಿ ಮಾಡಬಾರದು ಎಂಬ ಅಭಿಯಾನವೂ ಆ ದೇಶಗಳಲ್ಲಿ ನಡೆದಿದೆ.

‘ನೂಪುರ್ ಅವರು ವಿವಿಧ ವಿಷಯಗಳ ಬಗ್ಗೆ ಪಕ್ಷದ ನಿಲುವಿಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಪಕ್ಷದ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಪಕ್ಷದ ಶಿಸ್ತು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಹೇಳಿಕೆ ಬಿಡುಗಡೆ ಮಾಡಿ, ‘ಪಕ್ಷವು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ಯಾವುದೇ ಧರ್ಮ, ವ್ಯಕ್ತಿ ಅವಮಾನಿಸುವುದನ್ನು ಬಲವಾಗಿ ಖಂಡಿಸುತ್ತದೆ. ಬಿಜೆಪಿ ಅಂತಹ ವ್ಯಕ್ತಿಗಳನ್ನು ಅಥವಾ ಚಿಂತನೆಗಳನ್ನು ಪ್ರಚುರಪಡಿಸುವುದಿಲ್ಲ’ ಎಂದು ತಿಳಿಸಿದ್ದರು.

ಈ ಬೆಳವಣಿಗೆಯ ನಡುವೆ ಶರ್ಮಾ ಅವರು ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಪ್ರವಾದಿ ಕುರಿತು ನೀಡಿದ್ದ ಹೇಳಿಕೆಯನ್ನು ಬೇಷರತ್ತಾಗಿ ವಾಪಸ್‌ ಪಡೆದಿದ್ದು, ಮಹಾದೇವನ (ಶಿವ) ಬಗ್ಗೆ ಅಗೌರವ ತರುವಂತಹ ಹೇಳಿಕೆ ನೀಡುತ್ತಿರುವವರ ಬಗ್ಗೆ ಖಂಡಿಸುವ ಸಂದರ್ಭದಲ್ಲಿ ಈ ಮಾತು ಆಡಿದ್ದಾಗಿ ತಿಳಿಸಿದ್ದಾರೆ.

ಬಿಜೆಪಿ ಹೇಳಿಕೆ ಹೊರ ಬಿದ್ದ ಬೆನ್ನಲ್ಲೆಶ್ರೀನಗರದಲ್ಲಿ ಮಾತನಾಡಿರುವ ನ್ಯಾಷನಲ್‌ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದು, ದಿಢೀರ್ ಎಚ್ಚೆತ್ತುಕೊಂಡು ಈ ಹೇಳಿಕೆ ನೀಡಿದೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.