ನವದೆಹಲಿ: ಫೆ.16ರಂದು ವಿಧಾನಸಭಾ ಚುನಾವಣೆ ಹೊಂದಿರುವ ತ್ರಿಪುರಾದಲ್ಲಿ ಬಿಜೆಪಿ ಶುಕ್ರವಾರದಿಂದ ಪ್ರಚಾರ ಆರಂಭಿಸಲಿದ್ದು, 35 ಪ್ರಚಾರ ರ್ಯಾಲಿಗಳನ್ನು ಆಯೋಜಿಸಲು ಆಲೋಚಿಸಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ನಡ್ಡಾ ಅಮರ್ಪುರ್ನಲ್ಲಿ ವಿಜಯ ಸಂಕಲ್ಪ ಯಾತ್ರೆ ಮೂಲಕ ಬೃಹತ್ ಚುನಾವಣಾ ಪ್ರಚಾರ ಸಮಾವೇಶ ಪ್ರಾರಂಭಿಸಲಿದ್ದಾರೆ.
ಈ ವಿಜಯ್ ಸಂಕಲ್ಪ ಯಾತ್ರೆ ಬಳಿಕ ಬಿಜೆಪಿಯ ಕೇಂದ್ರ ಸಚಿವರು, ಹಿರಿಯ ನಾಯಕರು ಮತ್ತು ತ್ರಿಪುರಾ ಸೇರಿದಂತೆ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಂದ ರಾಜ್ಯದಲ್ಲಿ 35 ರ್ಯಾಲಿಗಳನ್ನು ನಡೆಸಲು ಪಕ್ಷ ಆಲೋಚಿಸಿದೆ ಎಂದು ಮೂಲಗಳು ತಿಳಿಸಿವೆ.
ನಾಳೆ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ವಿಧಾನಸಭೆಯ ಎಲ್ಲಾ 60 ಸ್ಥಾನಗಳಿಗೆ ಫೆಬ್ರವರಿ 16 ರಂದು ಮತದಾನ ನಡೆಯಲಿದ್ದು, ಮಾರ್ಚ್ 2 ರಂದು ಫಲಿತಾಂಶ ಪ್ರಕಟವಾಗಲಿದೆ.
2018 ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರವನ್ನು ರಚಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.