ADVERTISEMENT

ಮೋದಿಯಿಂದಲ್ಲ, ಹಿಂದೂ ಅಭಿಮಾನದಿಂದ BJPಗೆ ಹೆಚ್ಚು ಸ್ಥಾನ: ಸುಬ್ರಮಣಿಯನ್ ಸ್ವಾಮಿ

ಪಿಟಿಐ
Published 25 ಫೆಬ್ರುವರಿ 2024, 13:15 IST
Last Updated 25 ಫೆಬ್ರುವರಿ 2024, 13:15 IST
<div class="paragraphs"><p>ಸುಬ್ರಮಣಿಯನ್ ಸ್ವಾಮಿ</p></div>

ಸುಬ್ರಮಣಿಯನ್ ಸ್ವಾಮಿ

   

ಪಟ್ನಾ: ಹೆಚ್ಚುತ್ತಿರುವ ‘ನಾವು ಹಿಂದೂಗಳು’ ಎಂಬ ಅಭಿಮಾನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ತಂದುಕೊಡಬಹುದೇ ಹೊರತು ಮೋದಿ ಮ್ಯಾಜಿಕ್‌ನಿಂದಲ್ಲ ಎಂದು ರಾಜ್ಯಸಭಾ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ.

ಕಾನೂನು ಸಮಾವೇಶದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ವ್ಯಕ್ತಿಗಿಂತ ಸಂಘಟನೆ ಮತ್ತು ಸಿದ್ದಾಂತಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ’ ಎಂದರು.

ADVERTISEMENT

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ಗೆಲ್ಲಲಿದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಬಾರಿ ಬಿಜೆಪಿ ತನ್ನೆಲ್ಲಾ ಹಿಂದಿನ ಸಾಧನೆಗಳನ್ನು ಮೀರಿಸಲಿದೆ ಎಂದು ನಾನು ನಂಬುತ್ತೇನೆ. ಈಗೀಗ ದೇಶದ ಜನರು ‘ಹಿಂದೂಗಳು’ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಿದ್ದಾರೆ. ನೆಹರೂ ಕಾಲದಲ್ಲಿ ಅನುಭವಿಸಿದ್ದ ಅನಿಶ್ಚಿತತೆ ಹಿಂದೂಗಳಲ್ಲಿ ಈಗ ಕಾಣುವುದಿಲ್ಲ’ ಎಂದರು.

‘ಅವರಿಂದಲೇ(ಮೋದಿ) ಈ ಬದಲಾವಣೆಯಾಗಿದೆ ಎಂದು ಕೆಲವರು ಭಾವಿಸಬಹುದು. ಇಂತಹ ವಿಷಯಗಳಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ. ಮೋದಿ ಮ್ಯಾಜಿಕ್ ಇದೆ ಎಂದು ನಾನು ಭಾವಿಸುವುದಿಲ್ಲ. ಕಾಂಗ್ರೆಸ್‌ನಂತೆ ಬಿಜೆಪಿ-ಆರ್‌ಎಸ್‌ಎಸ್‌ನಲ್ಲಿ ವ್ಯಕ್ತಿಗಳನ್ನು ಪೀಠದಲ್ಲಿ ಕೂರಿಸುವ ಸಂಸ್ಕೃತಿಯಿಲ್ಲ’ ಎಂದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೊಡ್ಡಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಲೇವಡಿ ಮಾಡಿದ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣ ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ. ‘ರಾಹುಲ್ ಗಾಂಧಿ ಮತ್ತು ಅವರ ತಾಯಿ(ಸೋನಿಯಾ ಗಾಂಧಿ) ಜೈಲಿನಲ್ಲಿರುವುದನ್ನು ನಾನು ನೋಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.