ಪಾಕೂರ್/ಗೊಡ್ಡಾ (ಜಾರ್ಖಂಡ್): ಜನರು ಚುನಾಯಿಸಿದ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸಿತು. ಆದರೆ ‘ಇಂಡಿಯಾ’ ಒಕ್ಕೂಟವು ಅದರ ಪಿತೂರಿಯ ವಿರುದ್ಧ ನಿಂತು, ಆ ಪಕ್ಷಕ್ಕೆ ಬಹುಮತ ದೊರೆಯದಂತೆ ನೋಡಿಕೊಂಡಿತು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದರು.
ಶನಿವಾರ ಅವರು ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯಮಂತ್ರಿಯಾಗಿ ಶುಕ್ರವಾರವಷ್ಟೆ ಪ್ರಮಾಣ ವಚನ ಸ್ವೀಕರಿಸಿದ ಚಂಪೈ ಸೊರೇನ್ ಅವರೂ ಯಾತ್ರೆಯಲ್ಲಿ ಪಾಲ್ಗೊಂಡು, ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.
‘ಬಿಜೆಪಿ ಬಳಿ ಹಣಬಲ ಹಾಗೂ ತನಿಖಾ ಸಂಸ್ಥೆಗಳು ಇವೆ. ಅದರಿಂದ ನಾನಗಾಗಲೀ, ಕಾಂಗ್ರೆಸ್ಗಾಗಲೀ ಭಯವಿಲ್ಲ. ಆಡಳಿತ ಪಕ್ಷದ ವಿಭಜಿಸುವ ಸಿದ್ಧಾಂತದ ವಿರುದ್ಧ ಹೋರಾಡುತ್ತೇವೆ’ ಎಂದರು.
ಪಾಕೂರ್ನಿಂದ ದೇವಗಢದ ಬಾಬಾ ವೈದ್ಯನಾಥ ಧಾಮಕ್ಕೆ ಭೇಟಿ ನೀಡಿ ರಾಹುಲ್ ಪ್ರಾರ್ಥನೆ ಸಲ್ಲಿಸಿದರು.
ದೀಪ ದಾಸ್ ಮುನ್ಶಿ ಅವರ ಕಣ್ಗಾವಲಿನಲ್ಲಿ 40 ಶಾಸಕರು
ಎಐಸಿಸಿ ಕಾರ್ಯದರ್ಶಿ ಹಾಗೂ ತೆಲಂಗಾಣದ ಕಾಂಗ್ರೆಸ್ ಉಸ್ತುವಾರಿ ದೀಪ ದಾಸ್ ಮುನ್ಶಿ ಅವರ ಕಣ್ಗಾವಲಿನಲ್ಲಿ ಜಾರ್ಖಂಡ್ನ ಜೆಎಂಎಂ ನೇತೃತ್ವದ ಸರ್ಕಾರದ 40 ಶಾಸಕರನ್ನು ಶಾಮಿರ್ಪೇಟೆಯ ‘ಲಿಯೋನಿಯಾ ಹಾಲಿಸ್ಟಿಕ್ ಡೆಸ್ಟಿನೇಷನ್’ನಲ್ಲಿ ಇರಿಸಲಾಗಿದೆ. ಒಬ್ಬೊಬ್ಬರಿಗೂ ಪ್ರತ್ಯೇಕ ಊಟದ ವ್ಯವಸ್ಥೆ, ಕೋಣೆಗಳ ಎದುರು ಒಬ್ಬೊಬ್ಬ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಯಾರೂ ಕಣ್ತಪ್ಪಿಸಿ ಹೊರಗೆ ಹೋಗದಂತೆ ನಿಗಾ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.