ಲಖನೌ: ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಹಳೆಯ ಸಾಮ್ರಾಜ್ಯಶಾಹಿ ಬ್ರಿಟಿಷ್ ಆಡಳಿತದೊಂದಿಗೆ ಹೋಲಿಕೆ ಮಾಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ದೇಶದಲ್ಲಿ 'ಕಂಪನಿ ಆಳ್ವಿಕೆ' ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರೈತರ ಆದಾಯ ದ್ವಿಗುಣಗೊಳ್ಳುವ ಸಾಧ್ಯತೆಯಿಲ್ಲ. ಸತ್ಯಾಂಶವೆಂದರೆ ರೈತರು ಗಳಿಸುತ್ತಿದ್ದ ಆದಾಯ ಕೂಡಾ ಕೊನೆಗೊಂಡಿದೆ. ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಬ್ರಿಟಿಷರು ಭಾರತವನ್ನು ವಶಪಡಿಸಿಕೊಂಡ ರೀತಿಯಲ್ಲೇ ದೇಶದಲ್ಲಿ ಕಂಪನಿ ಆಳ್ವಿಕೆ ಹೇರಲು ಬಿಜೆಪಿ ಬಯಸುತ್ತಿದೆ ಎಂದು ಅಖಿಲೇಶ್ ಹೇಳಿದರು.
ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅಖಿಲೇಶ್, ಸಾವಿರಾರು ರೈತರು ಸಮಸ್ಯೆಗಳನ್ನುಎತ್ತುತ್ತಿರುವಾಗ, ಸರ್ಕಾರವು ಅದನ್ನು ಬಗೆಹರಿಸಬೇಕು. ಆದರೆ ಬಿಜೆಪಿ ಸರ್ಕಾರವು ರೈತರ ಮೇಲೆ ತನ್ನ ಕಾನೂನುಗಳನ್ನು ಹೇರುತ್ತಿದೆ ಎಂದು ಆರೋಪಿಸಿದರು.
ಹೊಸ ಕೃಷಿ ಕಾಯ್ದೆಗಳು ಜಾರಿಗೆ ಬಂದರೆ ರೈತರು ಕಾರ್ಮಿಕರಾಗುತ್ತಾರೆ ಎಂಬ ಆತಂಕ ರೈತರಲ್ಲಿದೆ ಎಂದು ಅಖಿಲೇಶ್ ತಿಳಿಸಿದರು.
ಬಿಜೆಪಿಯ ಹಠಮಾರಿತನ ಮನೋಭಾವದಿಂದಾಗಿ ವಿವಿಧ ದೇಶಗಳ ಸಾಮಾಜಿಕ ಕಾರ್ಯಕರ್ತರು ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.
ಟೈಮ್ ನಿಯತಕಾಲಿಕೆಯು ತನ್ನ ಮುಖಪುಟವನ್ನು (ಕವರ್ ಪೇಜ್) ನಿರ್ಭೀತಿಯಿಂದ ಅಂದೋಲನದಲ್ಲಿ ಭಾಗವಹಿಸುತ್ತಿರುವ ಮಹಿಳಾ ರೈತರಿಗಾಗಿ ಮೀಸಲಿಟ್ಟಿದೆ ಎಂದು ಉಲ್ಲೇಖಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.