ADVERTISEMENT

ಬಾಬರಿ ಮಸೀದಿ ಧ್ವಂಸದ ಬಗ್ಗೆ ಬಿಜೆಪಿಗೆ ಮಾಹಿತಿಯೇ ಇರಲಿಲ್ಲ: ರಾಮ್ ನಾಯಕ್

ಐಎಎನ್ಎಸ್
Published 6 ಡಿಸೆಂಬರ್ 2021, 4:13 IST
Last Updated 6 ಡಿಸೆಂಬರ್ 2021, 4:13 IST
ರಾಮ್ ನಾಯಕ್ (ಪಿಟಿಐ ಸಂಗ್ರಹ ಚಿತ್ರ)
ರಾಮ್ ನಾಯಕ್ (ಪಿಟಿಐ ಸಂಗ್ರಹ ಚಿತ್ರ)   

ನವದೆಹಲಿ: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸುವ ವಿಚಾರ ಬಿಜೆಪಿಗೆ ತಿಳಿದೇ ಇರಲಿಲ್ಲ. ಮಸೀದಿಯನ್ನು ಧ್ವಂಸಗೊಳಿಸಿದ ಬಳಿಕವಷ್ಟೇ ಆ ಮಾಹಿತಿ ತಿಳಿದಿತ್ತು ಎಂದು ಕೇಂದ್ರದ ಮಾಜಿ ಸಚಿವ, ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ರಾಮ್ ನಾಯಕ್ ಹೇಳಿದ್ದಾರೆ.

ನಾಯಕ್ ಅವರು ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಕುಳಿತುಕೊಂಡು ಅಯೋಧ್ಯೆಯಲ್ಲಿನ ಬೆಳವಣಿಗೆಗಳ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮಾಹಿತಿಗಳನ್ನು ನೀಡಿದ್ದರು.

ಬಾಬರಿ ಮಸೀದಿ ಧ್ವಂಸಗೊಳಿಸಿದ ದಿನದ (ಡಿಸೆಂಬರ್ 6) ಸಂದರ್ಭದಲ್ಲಿ ‘ಐಎಎನ್‌ಎಸ್’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ರಾಮ್ ನಾಯಕ್ ಅವರು ಅಯೋಧ್ಯೆ ಘಟನೆಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

‘1992ರ ಡಿಸೆಂಬರ್ 6, ಆ ಸಂದರ್ಭ ನಾನು ಪಕ್ಷದ ಮುಖ್ಯ ಸಚೇತಕನಾಗಿದ್ದೆ. ಸುಂದರ್ ಸಿಂಗ್ ಭಂಡಾರಿ ಸೇರಿದಂತೆ ಇತರ ನಾಯಕರ ಜತೆ ದೆಹಲಿಯ ಪ್ರಧಾನ ಕಚೇರಿಯಲ್ಲಿ ಕುಳಿತು ಅಯೋಧ್ಯೆಯಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ. ಆ ಸಂದರ್ಭದಲ್ಲಿ ಸಂವಹನ ಸುಲಭವಾಗಿರಲಿಲ್ಲ, ಮೊಬೈಲ್ ದೂರವಾಣಿಗಳು ಇರಲಿಲ್ಲ. ಸ್ಥಿರ ದೂರವಾಣಿ ಮೂಲಕ ಮಾಹಿತಿ ಪಡೆಯುತ್ತಿದ್ದೆವು. ಅಡ್ವಾಣಿ ಅವರು ಅಯೋಧ್ಯೆಯಲ್ಲಿದ್ದರೆ, ವಾಜಪೇಯಿ ದೆಹಲಿಯಲ್ಲೇ ಇದ್ದರು. ಎಷ್ಟು ಮಂದಿ ಕರಸೇವಕರನ್ನು ಅಯೋಧ್ಯೆ ಪ್ರವೇಶಿಸಲು ಬಿಟ್ಟರು, ಎಷ್ಟು ಮಂದಿ ಹೊರಗೆ ಇದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದೆವು. ಅಡ್ವಾಣಿ ಅವರು ಹಾಗೂ ಪಕ್ಷದ ಇತರ ನಾಯಕರು ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂಬ ಮಾಹಿತಿ ನಮಗೆ ದೊರೆತಿತ್ತು. ಆ ಬಳಿಕ ಏನಾಗಬಹುದು ಎಂಬ ಸುಳಿವು ಕೂಡ ನಮಗಿರಲಿಲ್ಲ. ಬಾಬರಿ ಮಸೀದಿ ಧ್ವಂಸಗೊಳಿಸಿದ ಬಳಿಕವಷ್ಟೇ ನಮಗೆ ಆ ಮಾಹಿತಿ ದೊರೆಯಿತು’ ಎಂದು ರಾಮ್ ನಾಯಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.