ಶ್ರೀನಗರ: ಇಲ್ಲಿನ ಲಾಲ್ ಚೌಕ್ ಬಳಿ ಇರುವ ಘಂಟಾ ಘರ್ (ಕ್ಲಾಕ್ ಟವರ್) ಮೇಲೆ ತ್ರಿವರ್ಣ ಧ್ವಜ ಹಾರಿಸಲು ಮುಂದಾದ ಬಿಜೆಪಿಯ ಮೂವರು ಕಾರ್ಯಕರ್ತರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
14 ತಿಂಗಳ ಗೃಹ ಬಂಧನದಿಂದ ಬಿಡುಗಡೆಯಾದ ನಂತರ ಇತ್ತೀಚೆಗೆ ಪತ್ರಕರ್ತರೊಂದಿಗೆ ಮಾತನಾಡಿದ್ದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಜಮ್ಮು ಮತ್ತು ಕಾಶ್ಮೀರದ ಧ್ವಜವನ್ನು ಮರಳಿ ಸ್ಥಾಪಿಸಿದ ನಂತರವೇ ರಾಷ್ಟ್ರ ಧ್ವಜ ಹಿಡಿಯುವುದಾಗಿ ಹೇಳಿದ್ದರು. ಇದನ್ನು ವಿರೋಧಿಸಿದ್ದ ಬಿಜೆಪಿ, ದೇಶದ್ರೋಹದ ಹೇಳಿಕೆ ನೀಡಿರುವ ಮುಫ್ತಿ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿತ್ತು.
‘ಬಿಜೆಪಿ ಕಾರ್ಯಕರ್ತರ ಗುಂಪು ಘಂಟಾ ಘರ್ ಮೇಲೆ ರಾಷ್ಟ್ರಧ್ವಜ ಹಾರಿಸಲು ಮುಂದಾಗಿತ್ತು. ಕೂಡಲೇ ಅವರನ್ನು ತಡೆದ ಪೊಲೀಸರು ಮೂವರನ್ನು ಬಂಧಿಸಿ ಕೋಟಿಬಾಗ್ ಠಾಣೆಗೆ ಕರೆದೊಯ್ದರು’ ಎಂದು ಹೇಳಲಾಗಿದೆ.
‘ಕಾಶ್ಮೀರದಲ್ಲಿ ರಾಷ್ಟ್ರ ಧ್ವಜವಷ್ಟೇ ಹಾರಾಡಬೇಕು. ಈ ಬಗ್ಗೆ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಮತ್ತು ಪೀಪಲ್ಸ್ ಅಲೆಯನ್ಸ್ ಫಾರ್ ಗುಪ್ಕಾರ್ ಮೈತ್ರಿಕೂಟದ (ಪಿಎಜಿಡಿ) ಸದಸ್ಯರಿಗೆ ಸ್ಪಷ್ಟ ಸಂದೇಶ ರವಾನಿಸುವುದು ನಮ್ಮ ಉದ್ದೇಶವಾಗಿತ್ತು. ಹೀಗಾಗಿ ತ್ರಿವರ್ಣ ಧ್ವಜ ಹಾರಿಸಲು ಪ್ರಯತ್ನಿಸಿದ್ದೆವು’ ಎಂದು ಬಿಜೆಪಿ ಕಾರ್ಯಕರ್ತ ಬಷರತ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.