ಬೆಂಗಳೂರು: 75 ಭರವಸೆಗಳಿರುವ ಬಿಜೆಪಿಚುನಾವಣಾ ಪ್ರಣಾಳಿಕೆಸೋಮವಾರ ಬಿಡುಗಡೆ ಮಾಡಿದೆ.ಬಿಜೆಪಿ ಸಂಕಲ್ಪ್ ಪತ್ರ್ ಎಂಬ ಈ ಪ್ರಣಾಳಿಕೆಯಲ್ಲಿ ಸಂಕಲ್ಪಿಕ್ ಭಾರತ್, ಸಶಕ್ತ್ ಭಾರತ್ ಎಂಬ ಘೋಷಣೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಮುಖಪುಟದಲ್ಲಿ ರಾರಾಜಿಸಿದೆ.
2014ರ ಚುನಾವಣಾ ಪ್ರಣಾಳಿಕೆಯ ಮುಖಪುಟದಲ್ಲಿ ನರೇಂದ್ರ ಮೋದಿಯವರ ಜತೆ ಬಿಜೆಪಿಯ 10 ನಾಯಕರ ಫೋಟೊ ಇತ್ತು.ಏಕ್ ಭಾರತ್ ಶ್ರೇಷ್ಠ್ ಭಾರತ್ ಎಂಬ ಘೋಷಣೆಯಿರುವ ಈ ಪ್ರಣಾಳಿಕೆಯಲ್ಲಿ ಮೇಲೆ ಎಡಭಾಗದಲ್ಲಿಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ ಅಡ್ವಾಣಿ, ರಾಜನಾಥ್ ಸಿಂಗ್, ಮುರಳಿ ಮನೋಹರ್ ಜೋಷಿಯವರಫೋಟೊ ಇತ್ತು.
ಕೆಳಗಡೆ ಮಧ್ಯಭಾಗದಲ್ಲಿ ನರೇಂದ್ರ ಮೋದಿ ಜತೆ ಮನೋಹರ್ ಪರ್ರೀಕರ್, ರಮಣ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಸುಂಧರಾ ರಾಜೇ ಅವರ ಚಿತ್ರವಿತ್ತು.
2009ರ ಚುನಾವಣಾ ಪ್ರಣಾಳಿಕೆಯ ಮುಖಪುಟವನ್ನು ಗಮನಿಸಿದರೆ ಅದರಲ್ಲಿ ವಾಜಪೇಯಿ, ಅಡ್ವಾಣಿ ಮತ್ತು ರಾಜನಾಥ್ ಸಿಂಗ್ ಅವರ ಫೋಟೊ ಇದೆ. ಆದರೆ ಈ ಬಾರಿಯ ಚುನಾವಣಾ ಪ್ರಣಾಳಿಕೆ ಮುಖಪುಟದಲ್ಲಿ ನರೇಂದ್ರ ಮೋದಿ ಮಾತ್ರ ಇದ್ದಾರೆ.
2019ರ ಚುನಾವಣಾ ಪ್ರಣಾಳಿಕೆಯಲ್ಲಿ ಅಧ್ಯಕ್ಷರ ಮಾತು ಪುಟದಲ್ಲಿ ಅಮಿತ್ ಶಾ ಅವರದ್ದು ಮತ್ತು ಸಂಕಲ್ಪ್ ಪತ್ರದ ಬಗ್ಗೆ ಇರುವ ಪುಟದಲ್ಲಿ ರಾಜನಾಥ್ ಸಿಂಗ್ ಅವರ ಫೋಟೊ ಇದೆ. ಇನ್ನಿತರ ಪುಟಗಳಲ್ಲಿಯೂ ಮೋದಿ ಫೋಟೊ ಇದೆ.
ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕೂಡಲೇ ಕಾಂಗ್ರೆಸ್ ಸಂಸದ ಅಹ್ಮದ್ ಪಟೇಲ್ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಪ್ರಣಾಳಿಕೆ ನಡುವಿನ ವ್ಯತ್ಯಾಸ ಮುಖಪುಟ ನೋಡಿದ ಕೂಡಲೇ ತಿಳಿಯುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶದ ಜನರ ಚಿತ್ರವಿದ್ದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಮೋದಿಯವರ ಚಿತ್ರ ಮಾತ್ರ ಇದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.