ADVERTISEMENT

ಗುಜರಾತ್‌ನಲ್ಲಿ ಬಿಜೆಪಿಯ ಹುಸಿ ಸಂಕಥನ: ಸಿಪಿಎಂ

ಪಿಟಿಐ
Published 1 ಡಿಸೆಂಬರ್ 2022, 16:03 IST
Last Updated 1 ಡಿಸೆಂಬರ್ 2022, 16:03 IST
   

ನವದೆಹಲಿ: ಗುಜರಾತ್‌ನಲ್ಲಿ ಬಿಜೆಪಿಯ ಚುನಾವಣಾ ಪ್ರಚಾರವು ವಾಸ್ತವವನ್ನು ತಲೆ ಕೆಳಗಾಗಿಸಿದೆ ಮತ್ತು ಹುಸಿ ಸಂಕಥನ ಕಟ್ಟಿದೆ ಎಂದು ಸಿಪಿಎಂ ಆರೋಪಿಸಿದೆ.

ಗುಜರಾತ್‌ನಲ್ಲಿ ಬಿಜೆಪಿಯ ಪ್ರಚಾರವು ವಿಷಮಯವಾಗಿದೆ. ರಾಜ್ಯವು ಹಿಂದುತ್ವವಾದಿ ಶಕ್ತಿಗಳ ಪ‍್ರಯೋಗಾಲಯವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದಿದೆ.

‘ಅಮಿತ್ ಶಾ ಅವರು ಭಾಷಣದಲ್ಲಿ ಹೇಳಿರುವ ಕೆಲವು ವಿಚಾರಗಳು ಗುಜರಾತ್‌ನಿಂದ ಹೊರಗೆ ಇರುವವರಲ್ಲಿ ಆಘಾತ ಉಂಟು ಮಾಡಿದೆ. ಆದರೆ, ಆರ್‌ಎಸ್‌ಎಸ್‌–ಬಿಜೆಪಿ ವಾಸ್ತವವನ್ನು ತಲೆ ಕೆಳಗಾಗಿಸಿ ಹುಸಿ ಸಂಕಥವನ್ನು ಹೇಗೆ ಕಟ್ಟಿದೆ ಎಂಬುದನ್ನು ಇದು ತೋರಿಸುತ್ತದೆ’ ಎಂದು ಸಿಪಿಎಂನ ಮುಖವಾಣಿ ‘ಪೀಪಲ್ಸ್ ಡೆಮಾಕ್ರಸಿ’ಯಲ್ಲಿ ಹೇಳಲಾಗಿದೆ.

ADVERTISEMENT

ಶಾ ಅವರ ಪ್ರಕಾರ, 2002ರಲ್ಲಿ ನಡೆದ ಮುಸ್ಲಿಮರ ಹತ್ಯಾಕಾಂಡವು ಗಲಭೆಕೋರರಿಗೆ ಕಲಿಸಿದ ಪಾಠ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

‘ವಿರೋಧ ಪಕ್ಷಗಳು ದೇಶವಿರೋಧಿಗಳಾಗಿವೆ ಮತ್ತು ಗುಜರಾತಿ ವಿರೋಧಿಗಳನ್ನು ಬೆಂಬಲಿಸುತ್ತಿವೆ. ಜಾತ್ಯತೀತತೆಯ ರಕ್ಷಣೆ ಮತ್ತು ಭಯೋತ್ಪಾದನೆಯ ಬಗ್ಗೆ ಮೃದು ನಿಲುವು ತಳೆದಿರುವ ಈ ಪಕ್ಷಗಳು ದೇಶವಿರೋಧಿ ಎಂಬುದೇ ಬಿಜೆಪಿಯ ಪ್ರಚಾರದ ಕೇಂದ್ರವಾಗಿದೆ. ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೂಡ ಇದೇ ರೀತಿಯ ಪ್ರಚಾರ ನಡೆಸಲಾಗಿತ್ತು. ಪಾಕಿಸ್ತಾನ ಮತ್ತು ಭಯೋತ್ಪಾದನೆಯನ್ನು ಮುಸ್ಲಿಮರ ಜೊತೆಗೆ ತಳಕು ಹಾಕಲಾಗುತ್ತಿತ್ತು. ಜಾತ್ಯತೀತ ಪಕ್ಷಗಳು ಮುಸ್ಲಿಮರ ತುಷ್ಟೀಕರಣದಲ್ಲಿ ತೊಡಗಿವೆ ಮತ್ತು ಭಯೋತ್ಪಾದನೆಯೊಂದಿಗೆ ಕೈಜೋಡಿಸಿವೆ ಎಂದು ಆರೋಪಿಸಲಾಗುತ್ತಿತ್ತು. ಗುಜರಾತ್‌ನ ಸಂಕಥವನ್ನು ವಿರೋಧಿಸುವವರು ಗುಜರಾತ್‌ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟಲಾಗುತ್ತಿತ್ತು’ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

ಬಿಜೆಪಿಯ ಕೋಮುವಾದಿ ಪ್ರಚಾರದ ಗುರಿಯೇ ಮುಸ್ಲಿಮರಾಗಿದ್ದಾರೆ. ಕೋಮು ನೆಲೆಯ ವಿಭಜನೆಯು ನಗರಗಳಲ್ಲಿ ಎದ್ದು ಕಾಣುವಂತಿದೆ. ಮುಸ್ಲಿಮರೇ ಇರುವ ಪ್ರದೇಶಗಳ ಸ್ಥಿತಿ ಅತ್ಯಂತ ಕೆಟ್ಟದಾಗಿವೆ. ಹಿಂದುತ್ವ ಕಾರ್ಯಸೂಚಿ ಮತ್ತು ಹೆಚ್ಚು ಹೆಚ್ಚು ಸೌಲಭ್ಯಗಳ ಭರವಸೆಯು ಗೆಲುವು ತಂದುಕೊಡಬಲ್ಲದು ಎಂಬ ವಿಶ್ವಾಸ ಬಿಜೆಪಿಗೆ ಇದೆ. ವಿಷಪೂರಿತ ಕೋಮುವಾದಿ ಪ್ರಚಾರವನ್ನು ತಡೆಯುವ ವ್ಯವಸ್ಥೆಯೇ ಇಲ್ಲದಾಗಿದೆ ಎಂದು ಸಂಪಾದಕೀಯದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.