ಮುಜಫ್ಫರಾಬಾದ್/ಇಸ್ಲಾಮಾಬಾದ್ (ರಾಯಿಟರ್ಸ್): ಭಾರತ ಸ್ವಾತಂತ್ಯೋತ್ಸವ ದಿನದಂದೇ ಪಾಕಿಸ್ತಾನವು ಕರಾಳ ದಿನ ಆಚರಿಸಿದೆ. ಇದೇ ವೇಳೆ ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಸಾವಿರಕ್ಕೂ ಹೆಚ್ಚು ಸದಸ್ಯರು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಮುಜಫ್ಫರಾಬಾದ್ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಕಪ್ಪು ಬಾವುಟ ಹಿಡಿದು, ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು.
‘ಭಾರತದ ಕೊನೆಯ ಸೈನಿಕ ಇರುವವರೆಗೆ ನಮ್ಮ ಪೂರ್ಣ ಬಲದೊಂದಿಗೆ ಸಶಸ್ತ್ರ ಹೋರಾಟ ನಡೆಯುತ್ತದೆ’ಎಂದುಪ್ರತಿಭಟನಾನಿರತರನ್ನು ಉದ್ದೇಶಿಸಿ ಹಿಜ್ಬುಲ್ ಉಪ ಕಮಾಂಡರ್ ಸೈಫುಲ್ಲಾ ಖಾಲಿದ್ ಹೇಳಿದ್ದಾನೆ.
ಕಾಶ್ಮೀರ ವಿಚಾರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಸಿಗದ ಕಾರಣ ಆಕ್ರೋಶಗೊಂಡಿರುವ ಪಾಕಿಸ್ತಾನ, ಕರಾಳ ದಿನಾಚರಣೆಯ ಮೂಲಕಹತಾಶೆ ವ್ಯಕ್ತಪಡಿಸಿದೆ.ಪಾಕಿಸ್ತಾನದ ಪತ್ರಿಕೆಗಳೂ ಕರಾಳದಿನ ಆಚರಿಸಿವೆ.
–––
ವಿಶ್ವಸಂಸ್ಥೆಯಲ್ಲಿ ಇಂದು ಚರ್ಚೆ
ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆಗೆ ಪಾಕಿಸ್ತಾನ ಪತ್ರ ಬರೆದಿರುವ ಬೆನ್ನಲ್ಲೇ ಈ ಸಂಬಂಧ ಚರ್ಚೆಯನ್ನು ಕೈಗೆತ್ತಿಕೊಳ್ಳುವಂತೆ ಭದ್ರತಾ ಮಂಡಳಿಯನ್ನು ಚೀನಾ ಆಗ್ರಹಿಸಿದೆ.
‘ಸಭೆ ನಡೆಸುವಂತೆ ಇತ್ತೀಚೆಗೆ ಮನವಿ ಬಂದಿದೆ. ಶುಕ್ರವಾರ ಸಭೆ ನಡೆಯಲಿದೆ’ ಎಂದು ವಿಶ್ವಸಂಸ್ಥೆಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಕಾಶ್ಮೀರ ವಿಚಾರವಾಗಿ ನಾಲ್ಕು ದಶಕಗಳ ಬಳಿಕ ಚರ್ಚೆಗೆ ಸಮಯ ನಿಗದಿಯಾಗಿರುವುದು ರಾಜತಾಂತ್ರಿಕ ಜಯ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮ್ಮದ್ ಖುರೇಷಿ ಹೇಳಿದ್ದಾರೆ.
ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದು ಆಂತರಿಕ ವಿಚಾರ ಎಂದು ಭಾರತ ಈಗಾಗಲೇ ಅಂತರರಾಷ್ಟ್ರೀಯ ಸಮುದಾಯಕ್ಕೆ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲದೇ ವಾಸ್ತವವನ್ನು ಒಪ್ಪಿಕೊಳ್ಳುವಂತೆ ಸಲಹೆಯನ್ನೂ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.