ADVERTISEMENT

ಕಾರಿನಲ್ಲಿ ಸ್ಫೋಟ: ಭಯೋತ್ಪಾದನಾ ಕೃತ್ಯದ ಸಾಧ್ಯತೆ ತಳ್ಳಿಹಾಕದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2022, 21:15 IST
Last Updated 24 ಅಕ್ಟೋಬರ್ 2022, 21:15 IST
   

ಚೆನ್ನೈ: ಕೊಯಮತ್ತೂರಿನ ಉಕ್ಕಡಂ ದೇವಾಲಯದ ಬಳಿ ಕಾರಿನಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸ್ಫೋಟಗೊಂಡು ಯುವಕನೊಬ್ಬ ಮೃತಪಟ್ಟಿರುವ ಘಟನೆಯ ಹಿಂದೆ ಭಯೋತ್ಪಾದನಾ ಕೃತ್ಯದ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿಲ್ಲ.

ಈ ಸಂಬಂಧ ಮೃತ ಯುವಕನ ಆಪ್ತರಾಗಿರುವ 9 ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಭಾನುವಾರ ಬೆಳಿಗ್ಗೆ ಕಾರಿನಲ್ಲಿ ಸಿಲಿಂಡರ್‌ ಸ್ಫೋಟಗೊಂಡು ಅದರಲ್ಲಿದ್ದ ಜಮೀಶಾ ಮುಬಿನ್‌ ಎಂಬಾತ ಮೃತಪಟ್ಟಿದ್ದ. ಶ್ರೀಲಂಕಾದಲ್ಲಿ ಈಸ್ಟರ್‌ ದಿನದಂದು ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮುಬಿನ್‌ ಸೇರಿದಂತೆ ಐದು ಮಂದಿಯನ್ನು 2019ರಲ್ಲಿ ರಾಷ್ಟ್ರೀಯ ತನಿಖಾ ದಳ ವಿಚಾರಣೆಗೆ ಒಳಪಡಿಸಿತ್ತು. ಸಿಲಿಂಡರ್‌ ಸ್ಫೋಟದ ಬಳಿಕ ಪೊಲೀಸರು ಮುಬಿನ್‌ ಮನೆಯಲ್ಲಿ ಶೋಧ ನಡೆಸಿದಾಗ ಸ್ಫೋಟಕ ವಸ್ತುಗಳು ಲಭಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮುಬಿನ್‌ ದಾಳಿಗೆ ಸಂಚು ರೂಪಿಸಿದ್ದ ಎಂಬುದಕ್ಕೆ ಇದುವರೆಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಆದರೆ ಮುಬಿನ್ ಮತ್ತು ಇತರ ಮೂವರು ಮನೆಯಿಂದ ಭಾರವಾದ ವಸ್ತುವೊಂದನ್ನು ಕೊಂಡೊಯ್ಯುತ್ತಿರುವುದು ಸಿಸಿಟಿವಿ ಕ್ಯಾಮೆರಾ ದಲ್ಲಿ ಸೆರೆಯಾಗಿದೆ. ಇದು ಅಡುಗೆ ಅನಿಲ ಸಿಲಿಂಡರ್‌ ಇರಬಹುದು ಎಂದಿದ್ದಾರೆ.

ಈ ಕುರಿತು ತನಿಖೆ ನಡೆಸಲು ಪೊಲೀಸರು ಆರು ವಿಶೇಷ ತಂಡಗಳನ್ನು ರಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.