ADVERTISEMENT

ಆಸ್ಟ್ರೇಲಿಯಾದಲ್ಲಿ ಗುಂಡಿನ ದಾಳಿ ನಡೆಸಿದ್ದು ಭಾರತೀಯ: ತೆಲಂಗಾಣ ಪೊಲೀಸರು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 14:51 IST
Last Updated 16 ಡಿಸೆಂಬರ್ 2025, 14:51 IST
   

ಹೈದರಾಬಾದ್‌ (ಪಿಟಿಐ):ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ಭಾನುವಾರ ಗುಂಡಿನ ದಾಳಿ ನಡೆಸಿ 15 ಜನರನ್ನು ಹತ್ಯೆ ಮಾಡಿದ್ದ ಆರೋಪಿ (ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿರುವ) ಸಾಜಿದ್‌ ಅಕ್ರಂ (50) ಭಾರತೀಯ ಪ್ರಜೆ, ಹೈದರಾಬಾದ್‌ ನಗರದವನು ಎಂದು ತೆಲಂಗಾಣ ಪೊಲೀಸರು ಹೇಳಿದ್ದಾರೆ.

ಸಾಜಿದ್‌ ಅಕ್ರಂ ಪುತ್ರ ನವೀದ್‌ (24) ಜತೆ ಸೇರಿ ಬೋಂಡಿ ಬೀಚ್‌ನಲ್ಲಿ ಡಿ.14ರಂದು ‘ಹನುಕ್ಕಾ’ ಯಹೂದಿ ಹಬ್ಬದ ಪ್ರಾರಂಭೋತ್ಸವಕ್ಕಾಗಿ ಸೇರಿದ್ದ ಅಪಾರ ಸಂಖ್ಯೆಯ ಜನರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. 

‘ಬಿ.ಕಾಂ ಪದವೀಧರನಾದ ಸಾಜಿದ್‌ ಅಕ್ರಂ, 27 ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿದ್ದ. ಆಸ್ಟ್ರೇಲಿಯಾದಲ್ಲಿ ಶಾಶ್ವತವಾಗಿ ನೆಲೆಗೊಳ್ಳುವ ಮೊದಲು ಅಲ್ಲಿ ಯೂರೋಪ್‌ನ ಮಹಿಳೆಯೊಬ್ಬರನ್ನು ಮದುವೆಯಾಗಿದ್ದ. ಇವರಿಗೆ ಪುತ್ರ, ಪುತ್ರಿ ಇದ್ದಾರೆ. ಮಕ್ಕಳಿಬ್ಬರು ಆಸ್ಟ್ರೇಲಿಯಾದಲ್ಲೇ ಜನಿಸಿದ್ದು, ಅಲ್ಲಿನ ಪೌರತ್ವ ಹೊಂದಿದ್ದಾರೆ. ಸಾಜಿದ್‌ ಅಕ್ರಂ ಭಾರತದಲ್ಲಿರುವ ತನ್ನ ಸಂಬಂಧಿಗಳ ಜತೆಗೆ ಸೀಮಿತ ಸಂಪರ್ಕವನ್ನಷ್ಟೇ ಹೊಂದಿದ್ದ’ ಎಂದು ತೆಲಂಗಾಣ ಡಿಜಿಪಿ ಕಚೇರಿಯ ಪ್ರಕಟಣೆ ತಿಳಿಸಿದೆ.

ADVERTISEMENT

‘1998ರಲ್ಲಿ ಆಸ್ಟ್ರೇಲಿಯಾಕ್ಕೆ ಹೋದ ನಂತರ ಅಕ್ರಂ, ವಯಸ್ಸಾದ ತಂದೆ–ತಾಯಿಯನ್ನು ಭೇಟಿಯಾಗಲು, ಜಮೀನಿನ ವಿಷಯ ಸೇರಿದಂತೆ ತುರ್ತು ಸಂದರ್ಭದಲ್ಲಿ ಮಾತ್ರ ಕೇವಲ ಆರು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾನೆ. ತಂದೆ ನಿಧನರಾದ ಸಂದರ್ಭದಲ್ಲೂ ಆತ ಭಾರತಕ್ಕೆ ಬಂದಿಲ್ಲ. ಆಸ್ಟ್ರೇಲಿಯಾದಲ್ಲಿ  ಆತನ ಚಟುವಟಿಕೆಯಾಗಲಿ, ಭಯೋತ್ಪಾದಕ ಚಟುವಟಿಕೆಗಳ ಜೊತೆಗಿನ ನಂಟಿನ ಬಗ್ಗೆ ಕುಟುಂಬ ಸದಸ್ಯರಿಗೆ ಯಾವುದೇ ಮಾಹಿತಿ ಇಲ್ಲ’ ಎಂದು ಪೊಲೀಸರು ಹೇಳಿದ್ದಾರೆ.  

ಆಸ್ಟ್ರೇಲಿಯಾ ಪೊಲೀಸರ ವಶದಲ್ಲಿರುವ ಸಾಜಿದ್‌ ಪುತ್ರ ನವೀದ್‌ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತ ಒಮ್ಮೆಯೂ ಭಾರತಕ್ಕೆ ಭೇಟಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಬೋಂಡಿ ಬೀಚ್‌ನಲ್ಲಿ ನಡೆದ ಗುಂಡಿನ ದಾಳಿಯು ‘ಇಸ್ಲಾಮಿಕ್‌ ಸ್ಟೇಟ್‌ನಿಂದ ಪ್ರೇರಿತವಾದ ಭಯೋತ್ಪಾದಕ ದಾಳಿ’ ಎಂದು ಆಸ್ಟ್ರೇಲಿಯಾದ ಫೆಡರಲ್‌ ಪೊಲೀಸ್‌ ಕಮೀಷನರ್‌ ಕ್ರಿಸ್ಸಿ ಬ್ಯಾರೆಟ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.