ADVERTISEMENT

ಗಡಿ ಇತಿಹಾಸ ಬರೆಯುವ ಯೋಜನೆಗೆ ಒಪ್ಪಿಗೆ

ಸಲಹೆಗಳನ್ನು ಸ್ವಾಗತಿಸಿದ ರಾಜನಾಥ್‌ ಸಿಂಗ್‌

ಪಿಟಿಐ
Published 18 ಸೆಪ್ಟೆಂಬರ್ 2019, 20:00 IST
Last Updated 18 ಸೆಪ್ಟೆಂಬರ್ 2019, 20:00 IST
ರಾಜನಾಥ್‌
ರಾಜನಾಥ್‌   

ನವದೆಹಲಿ: ದೇಶದ ಗಡಿಗಳ ಇತಿಹಾಸ ಬರೆಯುವ ಯೋಜನೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಂಗಳವಾರ ಒಪ್ಪಿಗೆ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಗಡಿಗಳ ಇತಿಹಾಸ ದಾಖಲು ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ.

ಭಾರತೀಯ ಇತಿಹಾಸ ಸಂಶೋಧನಾ ಪರಿಷತ್‌, ನೆಹರೂ ಮೆಮೋರಿಯಲ್‌ ಮ್ಯೂಸಿಯಂ ಎಂಡ್‌ ಲೈಬ್ರೆರಿ, ಪತ್ರಾಗಾರ ಮಹಾನಿರ್ದೇಶನಾಲಯ,
ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳ ಜತೆಗೆ ರಾಜನಾಥ್‌ ಅವರು ಸಭೆ ನಡೆಸಿ ಈ ವಿಚಾರವನ್ನು ಚರ್ಚಿಸಿದ್ದಾರೆ.

ಗಡಿ ಗುರುತಿಸುವಿಕೆ, ಗಡಿ ನಿರ್ಮಾಣ, ಗಡಿ ಬದಲಾವಣೆ, ಭದ್ರತಾ ಪಡೆಗಳ ಪಾತ್ರ, ಗಡಿ ಪ್ರದೇಶಗಳ ಜನರ ಪಾತ್ರ, ಗಡಿ ಪ್ರದೇಶದಲ್ಲಿ ವಾಸವಿರುವ ಜನಾಂಗಗಳು, ಅವರ ಸಂಸ್ಕೃತಿ, ಜೀವನದ ಸಾಮಾಜಿಕ–ಆರ್ಥಿಕ ಅಂಶಗಳು ಈ ಅಧ್ಯಯನದ ಭಾಗವಾಗಲಿವೆ.

ADVERTISEMENT

ಗಡಿಗಳ ಬಗೆಗಿನ ಇತಿಹಾಸವು ಈ ಪ್ರದೇಶಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಿದೆ. ಇದು ದೇಶದ ಜನರಿಗೆ ಮತ್ತು ಮುಖ್ಯವಾಗಿ ಅಧಿಕಾರಿಗಳಿಗೆ ಗಡಿಗಳ ಬಗ್ಗೆ ಸರಿಯಾದ ತಿಳಿವಳಿಕೆಯನ್ನು ನೀಡಬಹುದು ಎಂದು ರಾಜನಾಥ್‌ ಹೇಳಿದ್ದಾರೆ.

ಆಕರ ಸಾಮಗ್ರಿ, ಸ್ಥೂಲ ಸ್ವರೂಪ, ಅಧ್ಯಯನ ವಿಧಾನ ಮತ್ತು ಕ್ರಿಯಾಯೋಜನೆಗೆ ಸಂಬಂಧಿಸಿ ಪರಿಣತರ ಸಲಹೆ ಪಡೆಯುವಂತೆ ಅಧಿಕಾರಿಗಳಿಗೆ ರಾಜನಾಥ್‌ ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.