ಮುಂಬೈ: ತನ್ನ ಜೀವವನ್ನು ಪಣಕ್ಕಿಟ್ಟು ಮಗುವನ್ನು ರಕ್ಷಿಸಿ ಶೌರ್ಯ ತೋರಿದ ರೈಲ್ವೆ ಸಿಬ್ಬಂದಿ ಮಯೂರ್ ಶೆಲ್ಕೆ ಅವರು ಈಗ ಅದೇ ಮಗುವಿನ ಶಿಕ್ಷಣಕ್ಕೂ ನೆರವಾಗಲು ಮುಂದಾಗಿದ್ದಾರೆ.
ಏಪ್ರಿಲ್ 17ರಂದು ವಾಂಗಾಣಿ ನಿಲ್ದಾಣದಲ್ಲಿ ರೈಲು ಹಳಿಗಳ ಮೇಲೆ ಬಿದ್ದಿದ್ದ ಮಗುವನ್ನು ಮಯೂರ್ ರಕ್ಷಿಸಿದ್ದರು. ದೃಷ್ಟಿದೋಷ ಇರುವ ತನ್ನ ತಾಯಿ ಜತೆ ತೆರಳುತ್ತಿದ್ದ ಸಂದರ್ಭದಲ್ಲಿ ಮಗು ಹಳಿಗಳ ಮೇಲೆ ಬಿದ್ದಿತ್ತು. ಇದೇ ಸಂದರ್ಭದಲ್ಲಿ ಅತಿ ವೇಗದಲ್ಲಿ ಉದ್ಯಾನ ಎಕ್ಸ್ಪ್ರೆಸ್ ಬರುತ್ತಿತ್ತು. ವೇಗದಲ್ಲಿ ಧಾವಿಸಿದ್ದ ಮಯೂರ್ ಮಗುವನ್ನು ರಕ್ಷಿಸಿ ತಾವು ಪಾರಾಗಿದ್ದರು. 7ರಿಂದ 8 ಸೆಕೆಂಡ್ಗಳ ಅವಧಿಯಲ್ಲಿ ನಡೆದ ಈ ಸಾಹಸ ಕಾರ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ತಮ್ಮ ಸಾಹಸ ಕಾರ್ಯಕ್ಕಾಗಿ ರೈಲ್ವೆ ಇಲಾಖೆ ಸೇರಿದಂತೆ ಹಲವು ಸಂಘ, ಸಂಸ್ಥೆಗಳು ನೀಡಿರುವ ಬಹುಮಾನದಲ್ಲಿನ ಅರ್ಧ ಮೊತ್ತವನ್ನು ಮಗುವಿನ ಶಿಕ್ಷಣಕ್ಕೆ ನೀಡುವುದಾಗಿ ಮಯೂರ್ ತಿಳಿಸಿದ್ದಾರೆ.
ರೈಲ್ವೆ ಸಚಿವಾಲಯ ಮಯೂರ್ ಅವರಿಗೆ ₹50 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದೆ. ಇದರಲ್ಲಿನ ₹25 ಸಾವಿರಗಳನ್ನು ತಾನು ರಕ್ಷಿಸಿದ ಮಗು ಸಾಹಿಲ್ ಶಿರಾಸತ್ಗೆ ನೀಡುವುದಾಗಿ ಮಯೂರ್ ಈಗಾಗಲೇ ತಿಳಿಸಿದ್ದಾರೆ.
‘ಮಗುವಿನ ಕುಟುಂಬದವರು ಬಡವರು ಎನ್ನುವುದು ತಿಳಿದು ಬಂದಿದೆ. ಮಗುವಿಗೆ ಶಿಕ್ಷಣ ನೀಡಲು ಕುಟುಂಬಕ್ಕೆ ಸಾಧ್ಯವಾಗುವುದಿಲ್ಲ. ನಾನು ಆ ಮಗುವನ್ನು ರಕ್ಷಿಸಿದ್ದೇನೆ. ಹೀಗಾಗಿ, ಬಹುಮಾನದ ಅರ್ಧ ಮೊತ್ತವನ್ನು ಮಗುವಿನ ಭವಿಷ್ಯಕ್ಕಾಗಿ ನೀಡುತ್ತಿದ್ದೇನೆ’ ಎಂದು ಮಯೂರ್ ತಿಳಿಸಿದ್ದಾರೆ.
ಕಾರ್ಪೋರೇಟ್ ಕಂಪನಿಯೊಂದು ಮಯೂರ್ ಅವರಿಗೆ ಮೋಟಾರ್ ಸೈಕಲ್ ಅನ್ನು ಬಹುಮಾನವಾಗಿ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.