ಕೋಲ್ಕತ್ತ: ಭೀತಿ ಹುಟ್ಟಿಸಿದರೆ ಮತ್ತು ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದರೆ ತೃಣಮೂಲ ಕಾಂಗ್ರೆಸ್ ನಾಯಕರ ಕೈ ಮತ್ತು ಕಾಲುಗಳನ್ನು ಮುರಿಯಿರಿ ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳುವ ಮೂಲಕ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕರೊಬ್ಬರು ಶನಿವಾರ ವಿವಾದಕ್ಕೆ ಕಾರಣರಾಗಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಬೊಂಗಾಂವ್ ದಕ್ಷಿಣದ ಬಿಜೆಪಿ ಶಾಸಕ ಸ್ವಪನ್ ಮಜುಂದಾರ್, 'ಸುಳ್ಳು ಪ್ರಕರಣಗಳಲ್ಲಿ ನಮ್ಮ ಕಾರ್ಯಕರ್ತರನ್ನು ಸಿಲುಕಿಸಲು ಟಿಎಂಸಿ ನಾಯಕರು ಪ್ರಯತ್ನಿಸಿದರೆ, ನಮ್ಮ ಕಾರ್ಯಕರ್ತರು ತೊಂದರೆಗೆ ಸಿಲುಕಿದ್ದೇ ಆದಲ್ಲಿ ಅಂತಹ ನಾಯಕರು ಸುರಕ್ಷಿತವಾಗಿ ಹಿಂದಿರುಗುವುದಿಲ್ಲ. ಆಗಿದ್ದಾಗಲಿ, ನಿಮ್ಮ ಆತ್ಮರಕ್ಷಣೆಗಾಗಿ ಅವರ ಕೈ ಕಾಲುಗಳನ್ನು ಮುರಿದು ನನ್ನ ಬಳಿಗೆ ಬನ್ನಿ. ಯಾವುದೇ ಪರಿಸ್ಥಿತಿಯಲ್ಲೂ ನಾನು ನಿಮ್ಮ ಪರವಾಗಿರುತ್ತೇನೆ' ಎಂದು ಪಕ್ಷದ ಸಭೆಯಲ್ಲಿ ಬೆಂಬಲಿಗರಿಗೆ ಹೇಳಿರುವುದು ಕಂಡುಬಂದಿದೆ.
ಈ ವಿಡಿಯೊ ಅಸಲಿಯತ್ತಿನ ಬಗ್ಗೆ ಪರೀಕ್ಷೆ ನಡೆದಿಲ್ಲ.
ಈ ಕುರಿತು ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ ಪ್ರತಿಕ್ರಿಯಿಸಿ, 'ಇದು ಬಿಜೆಪಿ ನಾಯಕರ ಮನಸ್ಥಿತಿ ಮತ್ತು ಸಂಸ್ಕೃತಿಯನ್ನು ತೋರಿಸುತ್ತದೆ. ಇಂತಹ ಭಾಷೆಯನ್ನು ಮತ್ತು ಬೆದರಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ನ ಜನಪ್ರಿಯತೆಯಿಂದ ಭಯಗೊಂಡಿರುವ ಅವರು, ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ' ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಮಾತನಾಡಿ, 'ನಮ್ಮ ಪಕ್ಷ ಹಿಂಸಾಚಾರದಲ್ಲಿ ನಂಬಿಕೆಯನ್ನಿಟ್ಟಿಲ್ಲ. ಬಿಜೆಪಿ ಶಾಸಕರು ಇಂತಹ ಹೇಳಿಕೆ ನೀಡಿರುವುದೇ ಆಗಿದ್ದರೆ, ಅದು ಬೊಂಗಾಂವ್ ಪುರಸಭೆ ಚುನಾವಣೆಗೂ ಮುನ್ನ ಸ್ಥಳೀಯ ಟಿಎಂಸಿ ನಾಯಕರಾದ ಅಲೋರಾಣಿ ಸರ್ಕಾರ್ ಅವರ ಬೆದರಿಕೆಗಳಿಗೆ ನೀಡಿದ ಪ್ರತಿಕ್ರಿಯೆಯಷ್ಟೆ' ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.