
ಪಣಜಿ (ಪಿಟಿಐ): ಉತ್ತರ ಗೋವಾದ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್ಕ್ಲಬ್ ಅಗ್ನಿ ಅವಘಡ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಸುರಿಂದರ್ ಕುಮಾರ್ ಖೋಸ್ಲಾ ಅವರನ್ನು ಕೆಲ ಪ್ರಭಾವಿ ವ್ಯಕ್ತಿಗಳು ರಕ್ಷಿಸುತ್ತಿದ್ದಾರೆ ಎಂದು ನೈಟ್ ಕ್ಲಬ್ ಜಾಗದ ಮೂಲ ಮಾಲೀಕ ಪ್ರದೀಪ್ ಘಾಡಿ ಅಮೋಂಕರ್ ಆರೋಪಿಸಿದ್ದಾರೆ.
‘ಡಿಸೆಂಬರ್ 6ರಂದು ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 25 ಜನರು ಮೃತಪಟ್ಟ ನಂತರ, ಬ್ರಿಟಿಷ್ ಪ್ರಜೆ ಖೋಸ್ಲಾ ಅವರನ್ನು ಇಂಗ್ಲೆಂಡ್ಗೆ ಪಲಾಯನ ಮಾಡಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ‘ಪಿಟಿಐ’ಗೆ ಶುಕ್ರವಾರ ನೀಡಿದ ಸಂದರ್ಶನದಲ್ಲಿ ಅಮೋಂಕರ್ ತಿಳಿಸಿದ್ದಾರೆ.
‘ಕ್ಲಬ್ ಅನ್ನು ಧ್ವಂಸಗೊಳಿಸಲು ಗ್ರಾಮ ಪಂಚಾಯಿತಿ ಹೊರಡಿಸಿದ್ದ ಆದೇಶವು ಖೋಸ್ಲಾ ಅವರ ಹೆಸರಿನಲ್ಲಿತ್ತು. ಕ್ಲಬ್ ವಿರುದ್ಧ ದಾಖಲಾಗಿರುವ ಎಲ್ಲ ದೂರುಗಳಲ್ಲಿ ಖೋಸ್ಲಾ ಹೆಸರಿದೆ. ಅವರೇ ಪ್ರಮುಖ ಆರೋಪಿ’ ಎಂದು ಹೇಳಿದ್ದಾರೆ.
‘ಖೋಸ್ಲಾ ಪ್ರಮುಖ ಆರೋಪಿಯಾಗಿದ್ದರೂ ಪ್ರಭಾವಿ ವ್ಯಕ್ತಿಗಳು ರಕ್ಷಿಸುತ್ತಿದ್ದಾರೆ. ಇದರಿಂದಲೇ ಅವರು ದೇಶದಿಂದ ಪಲಾಯನ ಮಾಡಲು ಸಾಧ್ಯವಾಗಿದೆ. ನೈಟ್ ಕ್ಲಬ್ಗೆ ಅನುಮತಿ ಕೋರಿದವರಿಗೆ ಆ ಜಾಗವು ಸೇರಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದರೂ ಅರ್ಪೋರಾ–ನಾಗೋವಾ ಪಂಚಾಯಿತಿ ಅನುಮತಿ ನೀಡಿದೆ’ ಎಂದು ಆರೋಪಿಸಿದ್ದಾರೆ.
‘ಖೋಸ್ಲಾ ಅವರೊಂದಿಗೆ ಜಮೀನಿನ ಮಾರಾಟ ಒಪ್ಪಂದ ಮಾಡಿಕೊಂಡಿದ್ದೆ. ಆದರೆ, ಅವರು ಆರು ತಿಂಗಳೊಳಗೆ ಹಣವನ್ನು ಪಾವತಿಸದಿದ್ದರಿಂದ ಒಪ್ಪಂದದಿಂದ ಹಿಂದೆ ಸರಿದಿದ್ದೆ. ಖೋಸ್ಲಾ ನನ್ನ ಜಮೀನಿನಲ್ಲಿ ನೈಟ್ ಕ್ಲಬ್ ಸ್ಥಾಪಿಸಿದ್ದರು’ ಎಂದು ತಿಳಿಸಿದ್ದಾರೆ.
ಖೋಸ್ಲಾ ಅವರಿಂದ ಭೂಮಿಯನ್ನು ಮರಳಿ ಪಡೆಯಲು ಅಮೋಂಕರ್ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಕ್ಲಬ್ ಮಾಲೀಕರಾದ ಸೌರಭ್ ಲೂಥ್ರಾ, ಗೌರವ್ ಲೂಥ್ರಾ ಮತ್ತು ಅಜಯ್ ಗುಪ್ತಾ ಸೇರಿದಂತೆ ಎಂಟು ಜನರನ್ನು ಬಂಧಿಸಿರುವ ಗೋವಾ ಪೊಲೀಸರು, ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಅದೇ ಎಫ್ಐಆರ್ನಲ್ಲಿ ಖೋಸ್ಲಾ ಅವರನ್ನು ಆರೋಪಿಯನ್ನಾಗಿ ಹೆಸರಿಸಿದ್ದಾರೆ. ಪೊಲೀಸರು ಖೋಸ್ಲಾ ಅವರನ್ನು ಹುಡುಕುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿವಿಲ್ ಮೊಕದ್ದಮೆ ಪಿಐಎಲ್ ಆಗಿ ಪರಿವರ್ತನೆ
ಅಮೋಂಕರ್ ಇತ್ತೀಚೆಗೆ ಖೋಸ್ಲಾ ವಿರುದ್ಧ ಬಾಂಬೆ ಹೈಕೋರ್ಟ್ನ ಗೋವಾ ಪೀಠದಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದರು. ಅಗ್ನಿ ದುರಂತಕ್ಕೆ ಹೊಣೆಗಾರಿಕೆಯನ್ನು ನಿಗದಿಪಡಿಸುವ ಸಲುವಾಗಿ ನ್ಯಾಯಾಲಯವು ಈ ಮೊಕದ್ದಮೆಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿವರ್ತಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.