ನವದೆಹಲಿ: ಫಿರೋಜ್ಪುರ ಸೆಕ್ಟರ್ನ ಕೆ.ಎಸ್.ವಾಲಾದ ಬಾರ್ಡರ್ ಔಟ್ ಪೋಸ್ಟ್ (ಬಿಒಪಿ) ಬಳಿ ಫೆಬ್ರುವರಿ 2ರಂದು ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ್ದ ಒಬ್ಬ ಪಾಕಿಸ್ತಾನಿ ನುಸುಳುಕೋರನನ್ನು ಗುಂಡಿಕ್ಕಿ ಕೊಂದಿರುವುದಾಗಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಗುರುವಾರ ತಿಳಿಸಿದೆ. .
ಬಿಎಸ್ಎಫ್ ಪ್ರಧಾನ ಕಚೇರಿಯ ಅಧಿಕಾರಿಗಳ ಪ್ರಕಾರ, ಬುಧವಾರ ಸಂಜೆ, ಗಸ್ತಿಗೆ ನಿಯೋಜಿಸಲಾದ ಸೈನಿಕರು ಫಿರೋಜ್ಪುರ ಸೆಕ್ಟರ್ನ ಕೆ.ಎಸ್. ವಾಲಾ ಪ್ರದೇಶದಲ್ಲಿ ಪಾಕಿಸ್ತಾನದ ಕಡೆಯಿಂದ ಗಡಿ ಬೇಲಿ ಹಾಕುವ ಮುನ್ನ ಕೆಲವು ಅನುಮಾನಾಸ್ಪದ ಚಲನೆಯನ್ನು ಗಮನಿಸಿದ್ದರು. ಕೆಲ ನುಸುಳುಕೋರರು ಗಡಿ ದಾಟಿ ಭಾರತೀಯ ಪ್ರದೇಶವನ್ನು ಪ್ರವೇಶಿಸಿದ್ದರು.
‘ಭದ್ರತಾ ಪಡೆಗಳು ನುಸುಳಿಕೋರನಿಗೆ ಎಚ್ಚರಿಕೆ ನೀಡಿದರು. ಆದರೂ ಅವನು ನಿಲ್ಲಲಿಲ್ಲ ಮತ್ತು ಆಕ್ರಮಣಕಾರಿ ರೀತಿಯಲ್ಲಿ ಮುಂದುವರಿದಿದ್ದ. ಅಪಾಯದ ಮುನ್ಸೂಚನೆ ಅರಿತ ಬಿಎಸ್ಎಫ್ ಯೋಧರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ಪಾಕಿಸ್ತಾನದ ನುಸುಳುಕೋರ ಮೃತಪಟ್ಟಿದ್ದಾನೆ’ ಎಂದು ಅಧಿಕಾರಿಗಳು ಹೇಳಿದರು.
ಬಳಿಕ, ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೊಸೀಜರ್ ಪ್ರಕಾರ ಸಮೀಪದ ಪ್ರದೇಶವನ್ನು ಸಂಪೂರ್ಣವಾಗಿ ಶೋಧಿಸಲಾಯಿತು, ಬಿಎಸ್ಎಫ್ ಪಡೆಗಳು ಭಾರತೀಯ ಭೂಪ್ರದೇಶಕ್ಕೆ ರಾಷ್ಟ್ರವಿರೋಧಿ ಅಂಶಗಳ ನುಸುಳಿವಿಕೆಯನ್ನು ವಿಫಲಗೊಳಿಸಿದವು ಎಂದು ಅವರು ಹೇಳಿದರು.
ಇತ್ತೀಚೆಗೆ ಈ ವರ್ಷದ ಜನವರಿ 28ರಂದು, ಪಂಜಾಬ್ನ ಗುರುದಾಸ್ಪುರ ಸೆಕ್ಟರ್ನಲ್ಲಿ ಪಾಕಿಸ್ತಾನದ ಶಸ್ತ್ರಾಸ್ತ್ರ ಮತ್ತು ಮಾದಕವಸ್ತು ಕಳ್ಳಸಾಗಣೆ ಪ್ರಯತ್ನವನ್ನು ಬಿಎಸ್ಎಫ್ ವಿಫಲಗೊಳಿಸಿತ್ತು. ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಮಾದಕವಸ್ತುಗಳನ್ನು ವಶಪಡಿಸಿಕೊಂಡಿತ್ತು.
ಈ ಹಿಂದೆಯೂ ಪಾಕಿಸ್ತಾನದ ಸ್ಮಗ್ಲರ್ಗಳು ಡ್ರೋನ್ಗಳನ್ನು ಬಳಸಿಕೊಂಡು ಪಶ್ಚಿಮ ಗಡಿಯಲ್ಲಿರುವ ಭಾರತೀಯ ಪ್ರದೇಶಗಳಿಗೆ ಮಾದಕ ವಸ್ತುಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಕಳ್ಳಸಾಗಣೆ ಮಾಡಲು ಪ್ರಯತ್ನಗಳನ್ನು ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.