ADVERTISEMENT

ರಾಜಸ್ಥಾನ: ಬಿಎಸ್‌ಪಿ ಶಾಸಕರ ಕಾಂಗ್ರೆಸ್‌ ಸೇರ್ಪಡೆ ಪ್ರಶ್ನಿಸಿ ಕೋರ್ಟ್‌ಗೆ ಮೊರೆ

ಪಿಟಿಐ
Published 29 ಜುಲೈ 2020, 7:08 IST
Last Updated 29 ಜುಲೈ 2020, 7:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೈಪುರ: ರಾಜಸ್ಥಾನದಲ್ಲಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಆರು ಜನ ಶಾಸಕರು ಕಾಂಗ್ರೆಸ್‌ನಲ್ಲಿ ವಿಲೀನವಾಗಿರುವುದನ್ನು ಪ್ರಶ್ನೆ ಮಾಡಿ ಬಿಎಸ್‌ಪಿ ಬುಧವಾರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

2018ರಲ್ಲಿ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಟಿಕೆಟ್‌ ಪಡೆದು ಆಯ್ಕೆಯಾಗಿದ್ದ ಆರು ಜನ ಶಾಸಕರು ಈಚೆಗೆ ಕಾಂಗ್ರೆಸ್‌ನಲ್ಲಿ ವಿಲೀನವಾಗಿದ್ದರು. ಇದನ್ನು ವಿರೋಧಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಭಗವಾನ್‌ ಸಿಂಗ್‌ ಬಾಬಾ ಅವರು ತಿಳಿಸಿದರು.

ಆರು ಜನ ಬಿಎಸ್‌ಪಿ ಶಾಸಕರ ಸೇರ್ಪಡೆಯಿಂದಾಗಿ ಒಟ್ಟು 200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರ ಸಂಖ್ಯೆ 107ಕ್ಕೆ ಏರಿದೆ. ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವ ಬೆನ್ನಲ್ಲೇ ಬಿಎಸ್‌ಪಿ ಶಾಸಕರು ಕಾಂಗ್ರೆಸ್‌ನಲ್ಲಿ ವಿಲೀನವಾಗಿರುವುದರಿಂದ, ಕಾಂಗ್ರೆಸ್‌ಗೆ ಸ್ವಲ್ಪ ಬಲಬಂದಂತಾಗಿದೆ.

ADVERTISEMENT

ಆದರೆ, ವಿಲೀನಕ್ಕೆ ಮಾನ್ಯತೆ ಇಲ್ಲ ಎಂದು ಹೇಳಿರುವ ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಸಂದರ್ಭ ಬಂದರೆ ಕಾಂಗ್ರೆಸ್‌ ವಿರುದ್ಧ ಮತ ಹಾಕಬೇಕು ಎಂದು ಈಗಾಗಲೇ ಸೂಚಿಸಿದ್ದು, ವಿಪ್‌ ಸಹ ಜಾರಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.