ADVERTISEMENT

‘ಗೋದಾವರಿ– ಕಾವೇರಿ ಜೋಡಣೆ ಘೋಷಣೆ ನಿರೀಕ್ಷೆ’

ಮಧ್ಯಂತರ ಬಜೆಟ್‌; ಶೋಭಾ ಕರಂದ್ಲಾಜೆ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 20:36 IST
Last Updated 31 ಜನವರಿ 2019, 20:36 IST

ನವದೆಹಲಿ: ರಾಜ್ಯದ ಬರಪೀಡಿತ ಜಿಲ್ಲೆಗಳ ಜನರ ನೆರವಿಗೆ ಬರುವ ನಿಟ್ಟಿನಲ್ಲಿ ಗೋದಾವರಿ– ಕಾವೇರಿ ನದಿ ಜೋಡಣೆ ಅಗತ್ಯವಿದೆ. ಶುಕ್ರವಾರ ಮಂಡನೆಯಾಗಲಿರುವ ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ಈ ಯೋಜನೆಗೆ ಆರ್ಥಿಕ ನೆರವು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.

ಕೃಷ್ಣಾ ಕಣಿವೆಯಲ್ಲಿ ಹಂಚಿಕೆಯಾಗಿರುವ 177 ಟಿಎಂಸಿ ಅಡಿ ನೀರನ್ನು ‘ಬಿ’ ಸ್ಕೀಂ ಅಡಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರದ ಹಣಕಾಸಿನ ನೆರವು ಸಿಗಲಿದೆ ಎಂಬ ವಿಶ್ವಾಸವೂ ಇದೆ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಕೃಷ್ಣಾ ‘ಬಿ’ ಸ್ಕೀಂ ಅಡಿ ನೀರು ಬಳಕೆ ಮಾಡಿಕೊಳ್ಳಲು ರಾಷ್ಟ್ರೀಯ ಯೋಜನೆ ರೂಪಿಸಬೇಕು ಎಂದು ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಿದೆ. ಈ ಮನವಿಯನ್ನು ಪುರಸ್ಕರಿಸಿದರೆ, ಉತ್ತರ ಕರ್ನಾಟಕ ಭಾಗದ ರೈತರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ಅವರು ಹೇಳಿದರು.

ADVERTISEMENT

‘ಬರದಿಂದ ತತ್ತರಿಸಿರುವ ದೇಶದ ಹಲವಾರು ರಾಜ್ಯಗಳ ರೈತ ಸಮುದಾಯಕ್ಕೆ ಮಧ್ಯಂತರ ಬಜೆಟ್‌ ಮೂಲಕ ವಿಶೇಷ ನೆರವು ದೊರೆಯುವ ಸಾಧ್ಯತೆ ಇದೆ. ಪ್ಯಾಕೇಜ್‌ ಮಾದರಿಯ ಹಣಕಾಸಿನ ನೆರವು ದೊರೆಯಬಹುದು ಎಂಬ ನಿರೀಕ್ಷೆ ಇದೆ’ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.

‘ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಾಜ್ಯದ ಮಹತ್ವದ ರೈಲ್ವೆ ಯೋಜನೆಗಳಿಗೂ ಮಧ್ಯಂತರ ಬಜೆಟ್‌ನಲ್ಲಿ ಆರ್ಥಿಕ ನೆರವು ದೊರೆಯಲಿದೆ ಎಂಬುದೇ ನಮ್ಮ ಆಶಯ. ಚುನಾವಣೆ ಹೊಸ್ತಿಲಲ್ಲಿ ಕೇಂದ್ರದಿಂದ ಆಶಾದಾಯಕ ಮಂಜೂರಾತಿಯನ್ನು ನಿರೀಕ್ಷಿಸಲಾಗುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.