ADVERTISEMENT

‘ಬುರೆವಿ’ ತೀವ್ರತೆ ಕುಸಿತ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 19:15 IST
Last Updated 3 ಡಿಸೆಂಬರ್ 2020, 19:15 IST
ಬುರೆವಿ ಚಂಡಮಾರುತವು ಅಪ್ಪಳಿಸುವ ಮುನ್ಸೂಚನೆ ಹಿನ್ನೆಲೆಯಲ್ಲಿ ಕೇರಳದ ವಲಿಯತುರ- ಕಡಲತೀರದಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ –ಪಿಟಿಐ ಚಿತ್ರ
ಬುರೆವಿ ಚಂಡಮಾರುತವು ಅಪ್ಪಳಿಸುವ ಮುನ್ಸೂಚನೆ ಹಿನ್ನೆಲೆಯಲ್ಲಿ ಕೇರಳದ ವಲಿಯತುರ- ಕಡಲತೀರದಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ –ಪಿಟಿಐ ಚಿತ್ರ   

ಚೆನ್ನೈ: ಹಿಂದೂ ಮಹಾಸಾಗರದಲ್ಲಿ ಉಂಟಾಗಿರುವ ಬುರೆವಿ ಚಂಡಮಾರುತವು ತೀವ್ರತೆಯನ್ನು ಕಳೆದುಕೊಂಡಿದ್ದು, ತೀವ್ರ ವಾಯುಭಾರ ಕುಸಿತವಾಗಿ ಬದಲಾಗಿದೆ.ಶುಕ್ರುವಾರ ಬೆಳಿಗ್ಗೆ ತಮಿಳುನಾಡಿ ರಾಮನಾಥಪುರ ಮತ್ತು ತೂತ್ತುಕುಡಿ ಬಳಿ ಭೂಸ್ಪರ್ಶ ಮಾಡಲಿದೆ. ಈ ವೇಳೆ ತಮಿಳುನಾಡು, ಕೇರಳದ ಹಲವೆಡೆ ಭಾರಿ ಮಳೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮಂಗಳವಾರ ತಡರಾತ್ರಿ ಶ್ರೀಲಂಕಾದ ಪೂರ್ವ ಕರಾವಳಿಯನ್ನು ಸ್ಪರ್ಶಿಸಿದ್ದ ಚಂಡಮಾರುತವು, ನಂತರ ತಮಿಳುನಾಡಿನತ್ತ ಸಾಗಿದೆ. ನಂತರ ಅದರ ತೀವ್ರತೆ ಕಡಿಮೆಯಾಗಿದೆ. ಆದರೆ ತಮಿಳುನಾಡು ಮತ್ತು ಕೇರಳದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಭಾರಿ ಮಳೆಯಾಗುತ್ತಿದೆ. ತಮಿಳುನಾಡಿನ ಕನ್ಯಾಕುಮಾರಿ ಬಳಿ ಚಂಡಮಾರುತವು ನೆಲಸ್ಪರ್ಶ ಮಾಡುವ ಸಾಧ್ಯತೆ ಇದೆ.

ಚಂಡಮಾರುತವು ಶ್ರೀಲಂಕಾ ಬಳಿ ಇದ್ದಾಗ 96 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿತ್ತು. ತಮಿಳುನಾಡಿನ ಬಳಿ ನೆಲಸ್ಪರ್ಶ ಮಾಡುವಾಗ 70 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಮರಗಳು, ವಿದ್ಯುತ್ ಕಂಬಗಳು ಉರುಳುವ ಅಪಾಯವಿದೆ. ಶೀಟಿನ ಛಾವಣಿಗಳು ಹಾರಿಹೋಗುವ ಅಪಾಯವಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ADVERTISEMENT

ತುರ್ತುಪರಿಸ್ಥಿತಿಯನ್ನು ಎದುರಿಸಲು ಕೇರಳ ಮತ್ತು ತಮಿಳುನಾಡಿನ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆಯ ಹಲವು ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದಾರೆ. ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.