ADVERTISEMENT

ವಿಧಾನಸಭೆ ಚುನಾವಣೆ: ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ಸಿಎಎ ಜಾರಿ -ಅಮಿತ್‌ ಶಾ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 15:41 IST
Last Updated 21 ಮಾರ್ಚ್ 2021, 15:41 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ
ಕೇಂದ್ರ ಗೃಹ ಸಚಿವ ಅಮಿತ್‌ ಶಾ   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೊಳಿಸಲಾಗುವುದು ಮತ್ತು70 ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿರುವವರಿಗೆ ಪೌರತ್ವ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಹೇಳಿದ್ದಾರೆ.

ಕೋಲ್ಕತ್ತಾದ ಪೂರ್ವ ವಲಯದ ಸಾಲ್ಟ್‌ಲೇಕ್‌ನಲ್ಲಿರುವ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾ ಅವರು, ಬಂಗಾಳ ವಿಧಾನಸಭೆ ಚುನಾವಣೆಗೆಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಶಾ, 'ನಮ್ಮ ಪ್ರಣಾಳಿಕೆಯನ್ನು ಸಂಕಲ್ಪ ಪತ್ರ ಎಂದು ಕರೆಯಲು ನಾವು ನಿರ್ಧರಿಸಿದ್ದೇವೆ. ಇದು ಕೇವಲ ಪ್ರಣಾಳಿಕೆಯಲ್ಲ. ಪಶ್ಚಿಮ ಬಂಗಾಳಕ್ಕಾಗಿ ದೇಶದ ಅತಿದೊಡ್ಡ ಪಕ್ಷದಸಂಕಲ್ಪ ಪತ್ರವಾಗಿದೆ. ನಾವು ಸುವರ್ಣ ಬಂಗಾಳವನ್ನು ಸೃಷ್ಟಿಸಲಿದ್ದೇವೆ' ಎಂದು ಭರವಸೆ ನೀಡಿದ್ದಾರೆ.

ADVERTISEMENT

'ಪೌರತ್ವ ತಿದ್ದುಪಡಿ ಕಾಯ್ದೆಯು ಮೊದಲ ಸಚಿವ ಸಂಪುಟ ಅಧಿವೇಶನದಲ್ಲಿ ಜಾರಿಗೆ ಬರಲಿದ್ದು, 70 ವರ್ಷಗಳಿಂದ ದೇಶದಲ್ಲಿ ನೆಲೆಸಿರುವವರಿಗೆ ಪೌರತ್ವ ನೀಡಲಾಗುವುದು. ಪ್ರತಿಯೊಂದು ನಿರಾಶ್ರಿತ ಕುಟುಂಬವೂ ಐದು ವರ್ಷದ ವರೆಗೆಪತ್ರಿವರ್ಷ ₹ 10ಸಾವಿರ ಪಡೆಯಲಿದೆ' ಎಂದಿದ್ದಾರೆ.'ಬಂಗಾಳದಲ್ಲಿ ಒಳನುಸುಳುವಿಕೆಗೆ ಅವಕಾಶವಿಲ್ಲದಂತೆ, ಗಡಿಯಲ್ಲಿ ಮುಳ್ಳುತಂತಿ ಬೇಲಿ ಹಾಕಿ ಭದ್ರತೆಯನ್ನು ಹೆಚ್ಚಿಸಲಾಗುವುದು' ಎಂದೂ ಹೇಳಿದ್ದಾರೆ.

ರಾಜ್ಯದಲ್ಲಿ ಸಿಎಎ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವಕಾಶ ನೀಡುತ್ತಿಲ್ಲ ಎಂದುಶಾ ಈ ಹಿಂದೆ ಸಾಕಷ್ಟು ಸಲ ಹೇಳಿದ್ದರು. ಹೀಗಾಗಿಅವರ ಹೇಳಿಕೆಗಳು ಮಹತ್ವ ಪಡೆದುಕೊಂಡಿದೆ.

ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌, ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗಿಯಾ, ಕೇಂದ್ರ ಸಚಿವ ದೇಬಸ್ರೀ ಚೌಧರಿ ಹಾಗೂ ಸಂಸದ ನಿಸಿತ್‌ ಪ್ರಮಾಣಿಕ್‌ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

294 ಸದಸ್ಯ ಬಲದ ಬಂಗಾಳ ವಿಧಾನಸಭೇಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನ ಪ್ರಕ್ರಿಯೆ 27 ರಂದು ನಡೆಯಲಿದ್ದು, ಅಂತಿಮ ಸುತ್ತು ಏಪ್ರಿಲ್‌ 29ರಂದು ನಡೆಯಲಿದೆ. ಮೇ 2ರಂದುಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.