ಕೇಂದ್ರ ಸಚಿವ ಶಾಂತನು ಠಾಕೂರ್
ಚಿತ್ರ: ಸ್ಕ್ರೀನ್ಗ್ರ್ಯಾಬ್
ಕೋಲ್ಕತ್ತ (ಪಿಟಿಐ): ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ‘ಶೀಘ್ರದಲ್ಲಿಯೇ’ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಕೇಂದ್ರ ಸಚಿವ ಶಂತನು ಠಾಕೂರ್ ಹೇಳಿದ್ದಾರೆ. ಈ ಕಾಯ್ದೆಯನ್ನು ವಿರೋಧಿಸುತ್ತಿರುವವರು ರಾಜಕೀಯ ಕಾರಣಗಳಿಗಾಗಿ ಹಾಗೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಯ್ದೆಯನ್ನು ದೇಶದಾದ್ಯಂತ ‘ಒಂದು ವಾರದಲ್ಲಿ’ ಜಾರಿಗೆ ತರಲಾಗುತ್ತದೆ ಎಂದು ಠಾಕೂರ್ ಅವರು ಕಳೆದ ವಾರ ಹೇಳಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯು ಚುನಾವಣೆ ಹತ್ತಿರವಾಗಿರುವ ಅವಕಾಶವನ್ನು ಬಳಸಿಕೊಂಡು ಕಾಯ್ದೆಯ ವಿಚಾರವನ್ನು ಪ್ರಸ್ತಾಪಿಸಿದೆ ಎಂದು ಇದಕ್ಕೆ ಪ್ರತಿಕ್ರಿಯಿಸಿದ್ದರು. ಅಲ್ಲದೆ, ‘ನಾನು ಬದುಕಿರುವವರೆಗೆ ರಾಜ್ಯದಲ್ಲಿ ಈ ಕಾಯ್ದೆಯ ಜಾರಿಗೆ ಅವಕಾಶ ಕೊಡುವುದಿಲ್ಲ’ ಎಂದು ಕೂಡ ಮಮತಾ ಹೇಳಿದ್ದರು.
ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಠಾಕೂರ್, ‘ಈ ಕಾಯ್ದೆಯು ದೇಶದ ಬೇಡಿಕೆ. ಕಾಯ್ದೆಯ ಅನುಷ್ಠಾನದ ವಿಚಾರದಲ್ಲಿ ಯಾವುದೇ ವಿರೋಧವೂ ಕೇಂದ್ರಕ್ಕೆ ಮಹತ್ವದ್ದಲ್ಲ’ ಎಂದರು. ‘ಇದು ನಾವು ನೀಡಿರುವ ಭರವಸೆ. ನಾವು ಮಾತು ತಪ್ಪುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಸಂಸತ್ತಿನ ಉಭಯ ಸದನಗಳು ಪೌರತ್ವ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಿವೆ. ಇದು ಜನರ ಇಚ್ಛೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ‘ಕಾಯ್ದೆಯನ್ನು ವಿರೋಧಿಸುತ್ತಿರುವವರು ಪರಿಸ್ಥಿತಿಯನ್ನು ಸಹಾನುಭೂತಿಯಿಂದ ಕಾಣುತ್ತಿಲ್ಲ (ತಮ್ಮ ದೇಶಗಳಿಂದ ವಲಸೆ ಬಂದಿರುವವರ ಪರಿಸ್ಥಿತಿ)’ ಎಂದು ಠಾಕೂರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.