ADVERTISEMENT

ದೆಹಲಿ, ಅಹಮದಾಬಾದ್‌, ಮುಂಬೈ ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ ಒಪ್ಪಿಗೆ

ಪಿಟಿಐ
Published 28 ಸೆಪ್ಟೆಂಬರ್ 2022, 15:48 IST
Last Updated 28 ಸೆಪ್ಟೆಂಬರ್ 2022, 15:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ನವದೆಹಲಿ, ಅಹಮದಾಬಾದ್‌ ಮತ್ತು ಮುಂಬೈನ ರೈಲು ನಿಲ್ದಾಣಗಳನ್ನು ಮರುಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಕಾರ್ಯಕ್ಕಾಗಿ ₹10 ಸಾವಿರ ಕೋಟಿ ಬಿಡುಗಡೆ ಮಾಡಲಾಗುವುದು’ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಬುಧವಾರ ಹೇಳಿದರು.

‘ಪ್ರತಿದಿನ 50 ಲಕ್ಷ ಜನರ ಸಂಚಾರ ಇರುವಂಥ 199 ರೈಲು ನಿಲ್ದಾಣಗಳನ್ನುಮೊದಲ ಹಂತದಲ್ಲಿ ಮರುಅಭಿವೃದ್ಧಿಪಡಿಸಲಾಗುವುದು. ಜೊತೆಗೆ, ನಿಲ್ದಾಣಗಳನ್ನು ಆಯಾ ನಗರದ ಸೌಂದರ್ಯದಕ್ಕೆ ಧಕ್ಕೆ ಬರದಂತ ರೀತಿಯಲ್ಲಿ ನಿರ್ಮಿಸಲಾಗುವುದು’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು.

‘47 ನಿಲ್ದಾಣಗಳಿಗೆ ಟೆಂಡರ್‌ ಕರೆಯಲಾಗಿದೆ. 32 ನಿಲ್ದಾಣಗಳ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ದೆಹಲಿ ನಿಲ್ದಾಣವನ್ನು ಮೂರುವರೆ ವರ್ಷದ ಒಳಗೆ ಮತ್ತು ಇನ್ನುಳಿದ ಎರಡು ನಿಲ್ದಾಣಗಳನ್ನು ಎರಡೂವರೆ ವರ್ಷದ ಒಳಗೆ ಮರುಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ’ ಎಂದರು.

ADVERTISEMENT

‘ನಿಲ್ದಾಣಗಳು ಪರಿಸರ ಸ್ನೇಹಿಯಾಗಿರಲಿವೆ. ನಿಲ್ದಾಣಗಳಲ್ಲಿ ಸೋಲಾರ್‌ ಶಕ್ತಿಯನ್ನು ಬಳಕೆ ಮಾಡಲಾಗುವುದು. ಇಲ್ಲಿ ನೀರು ಸಂರಕ್ಷಣಾ ಮಾದರಿಗಳನ್ನು ಬಳಸಲಾಗುವುದು ಮತ್ತು ಕಸದ ಮರುಬಳಕೆ ಮಾಡಲಾಗುವುದು’ ಎಂದರು.

ರಾಜ್ಯದಮೂರು ರೈಲು ನಿಲ್ದಾಣಗಳ ಮರುಅಭಿವೃದ್ಧಿ

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಹುಬ್ಬಳ್ಳಿಯ ಎಸ್‌ಎಸ್‌ಎಸ್‌, ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಗಳನ್ನೂ ಮರುಅಭಿವೃದ್ಧಿ ಪಡಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ‘ವಿಶ್ವ ದರ್ಜೆಯ ವಿಮಾನ ನಿಲ್ದಾಣದ ರೀತಿಯಲ್ಲಿ ಸರ್‌ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣವನ್ನು ಈಗಾಗಲೇ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಕಂಟೋನ್ಮೆಂಟ್‌ ಮತ್ತು ಯಶವಂತಪುರ ರೈಲು ನಿಲ್ದಾಣಗಳ ಮರುಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ’ ಎಂದು ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.