ADVERTISEMENT

ಉನ್ನಾವೊ ಅತ್ಯಾಚಾರ ಪ್ರಕರಣ: ಅಧಿಕಾರಿ ಖುಲಾಸೆ ಇಲ್ಲ

ಪಿಟಿಐ
Published 7 ನವೆಂಬರ್ 2022, 14:36 IST
Last Updated 7 ನವೆಂಬರ್ 2022, 14:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ ಮೊಕದ್ದಮೆಯ ದೋಷಿ, ಬಿಜೆಪಿ ಮಾಜಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ ವಿರುದ್ಧ ಅತ್ಯಾಚಾರ ಮೊಕದ್ದಮೆ ದಾಖಲಿಸುವಲ್ಲಿ ವಿಫಲರಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧದ ದೋಷಾರೋಪವನ್ನು ಹಿಂಪಡೆಯಲು ವಿಶೇಷ ನ್ಯಾಯಾಲಯ ನಿರಾಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಉನ್ನಾವೊದಲ್ಲಿ ಈ ಅತ್ಯಾಚಾರ ಪ್ರಕರಣ ನಡೆದಿತ್ತು. ಕುನ್ವಾರ್ ಬಹಾದ್ದೂರ್‌ ಸಿಂಗ್‌ ಅವರು ಆಗ ಉನ್ನಾವೊದ ಸಾಫಿಪುರದಲ್ಲಿ ವೃತ್ತ ನಿರೀಕ್ಷಕರಾಗಿದ್ದಾರೆ. ಅತ್ಯಾಚಾರ ಸಂತ್ರಸ್ತೆ ದೂರು ನೀಡಿದ್ದರೂ ದೂರು ದಾಖಲಿಸದ ಕಾರಣ ಕುನ್ವಾರ್‌ ಅವರ ವಿರುದ್ಧಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. ಅವರ ಇಬ್ಬರು ಸಹಾಯಕ ಅಧಿಕಾರಿಗಳಾದ ಡಿ.ಪಿ. ಶುಕ್ಲಾ ಮತ್ತು ದಿಗ್ವಿಜಯ್‌ ಸಿಂಗ್‌ ಅವರ ಹೆಸರನ್ನು ಆರೋಪಪಟ್ಟಿಯಲ್ಲಿ ಸೇರಿಸಲಾಗಿತ್ತು.

‘ಆರೋಪಿಗಳು ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಇದೇ ವೇಳೆ, ದೋಷಾರೋಪವನ್ನು ಖುಲಾಸೆಗೊಳಿಸುವಂತೆ ಕೋರಿ ಮೊಕದ್ದಮೆಯ ಮೊದಲ ಆರೋಪಿ ಕುನ್ವಾರ್‌ ಬಹಾದ್ದೂರ್‌ ಸಿಂಗ್‌ ಪರವಾಗಿ ಸಲ್ಲಿಕೆಯಾಗಿರುವ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ನ್ಯಾಯಾಲಯ ಹೇಳಿದೆ.

ADVERTISEMENT

ಮೊಕದ್ದಮೆಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜನವರಿಗೆ ಕಾಯ್ದಿರಿಸಿದೆ. ಆಗ ಕುನ್ವಾರ್‌ ವಿರುದ್ಧ ಕೋರ್ಟ್‌ ಆರೋಪ ಹೊರಿಸಲಿದೆ ಎನ್ನಲಾಗಿದೆ.ಅವರೆಲ್ಲರ ವಿರುದ್ಧ ದೋಷ ಸಾಬೀತಾದರೆ ಅವರಿಗೆ 6 ತಿಂಗಳಿಂದ 2 ವರ್ಷದವರೆಗೆ ಜೈಲುಶಿಕ್ಷೆ ವಿಧಿಸಬಹುದಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.