ADVERTISEMENT

ಸೈರಸ್‌ ಮಿಸ್ತ್ರಿ ಪ್ರಕರಣ: ಕಾರು ಓಡಿಸುತ್ತಿದ್ದ ಅನಾಹಿತಾ ವಿರುದ್ಧ ಕೇಸು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ನವೆಂಬರ್ 2022, 13:57 IST
Last Updated 5 ನವೆಂಬರ್ 2022, 13:57 IST
   

ಮುಂಬೈ: ಉದ್ಯಮಿ ಸೈರಸ್‌ ಮಿಸ್ತ್ರಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಂದು ಕಾರು ಓಡಿಸುತ್ತಿದ್ದ ಡಾ. ಅನಾಹಿತಾ ಪಾಂಡೋಲೆ ಎಂಬುವವರ ವಿರುದ್ಧ ಮಹಾರಾಷ್ಟ್ರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಾರು ಚಲಾಯಿಸುತ್ತಿದ್ದ ಪಾಂಡೋಲೆ ಅವರೂ ಈ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರಿಗೆ ಇನ್ನೂ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಅನಾಹಿತಾ ಅವರ ಪತಿ ಡೇರಿಯಸ್ ಪಾಂಡೋಲ್ ಅವರ ಹೇಳಿಕೆಯನ್ನು ಮಹಾರಾಷ್ಟ್ರ ಪೊಲೀಸರು ಶುಕ್ರವಾರವಷ್ಟೇ ದಾಖಲಿಸಿಕೊಂಡಿದ್ದಾರೆ.

ADVERTISEMENT

‘ಕಾರು ಚಲಾಯಿಸುತ್ತಿದ್ದ ತನ್ನ ಪತ್ನಿ ಡಾ. ಅನಾಹಿತಾ ಪಾಂಡೋಲೆ ಕಾರನ್ನು ಎರಡನೇ ಲೇನ್‌ಗೆ ತರಲು ಸಾಧ್ಯವಾಗಲಿಲ್ಲ. ನಮ್ಮ ವಾಹನಕ್ಕಿಂತ ಮುಂದಿದ್ದ ಕಾರು ಮೂರನೇ ಲೇನ್‌ನಿಂದ ಎರಡನೇ ಲೇನ್‌ಗೆ ಹೋಯಿತು. ಅನಾಹಿತಾ ಕೂಡಾ ಅದನ್ನು ಅನುಸರಿಸಲು ಪ್ರಯತ್ನಿಸಿದರಾದರೂ, ಎರಡನೇ ಲೇನ್‌ನ ಬಲಭಾಗದಲ್ಲಿ ಟ್ರಕ್ ಇತ್ತು. ಹೀಗಾಗಿ ನಮ್ಮ ಕಾರು ಎರಡನೇ ಲೇನ್‌ಗೆ ಹೋಗಲು ಸಾಧ್ಯವಾಗದೇ ಡಿಕ್ಕಿ ಹೊಡೆಯಿತು’ ಎಂದು ಡೇರಿಯಸ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅನಾಹಿತಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಹಮದಾಬಾದ್‌ನಿಂದ ಮುಂಬೈಗೆ ಮರ್ಸಿಡಿಸ್‌ ಬೆಂಜ್‌ ಕಾರಿನಲ್ಲಿ ಬರುತ್ತಿದ್ದ ವೇಳೆ ಸೆ. 4ರಂದು ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ಬಳಿ ನಡೆದಿದ್ದ ಕಾರು ಅಪಘಾತದಲ್ಲಿ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ ಸಾವಿಗೀಡಾಗಿದ್ದರು. ಅಪಘಾತದ ವೇಳೆ ಕಾರು ಚಲಾಯಿಸುತ್ತಿದ್ದ ಡಾ. ಅನಾಹಿತಾ ಮತ್ತು ಅವರ ಪತಿ ಡೇರಿಯಸ್ ಗಂಭೀರವಾಗಿ ಗಾಯಗೊಂಡಿದ್ದರು. ಕಳೆದ ವಾರ ಮುಂಬೈನ ಆಸ್ಪತ್ರೆಯಿಂದ ಡೇರಿಯಸ್ ಬಿಡುಗಡೆ ಆಗಿದ್ದು, ಪೊಲೀಸರ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.