ADVERTISEMENT

ಉತ್ತರ ಪ್ರದೇಶದಲ್ಲಿ ಅಪಾಯಕಾರಿ ಹಂತಕ್ಕೆ ಅಪಹರಣ ಪ್ರಕರಣಗಳು: ಪ್ರಿಯಾಂಕಾ ಗಾಂಧಿ

ಏಜೆನ್ಸೀಸ್
Published 28 ಜುಲೈ 2020, 10:40 IST
Last Updated 28 ಜುಲೈ 2020, 10:40 IST
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ   

ಲಖನೌ: ಉತ್ತರ ಪ್ರದೇಶದಲ್ಲಿ ಅಪಹರಣ ಪ್ರಕರಣಗಳು ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

'ರಾಜ್ಯದಲ್ಲಿ ನಿರಂತರವಾಗಿ ಅಪಹರಣದ ಘಟನೆಗಳು ಹೆಚ್ಚುತ್ತಲೇ ಇವೆ. ಈ ವೇಳೆ ತ್ವರಿತವಾಗಿ ಕಾರ್ಯನಿರ್ವಹಿಸುವುದು ಪೊಲೀಸ್ ಮತ್ತು ಆಡಳಿತದ ಜವಾಬ್ದಾರಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ. ಜನರು ಈಗ ಸಂಕಷ್ಟದಲ್ಲಿದ್ದಾರೆ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೆ ಟ್ವೀಟ್ ಮಾಡುವ ಮೂಲಕವೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, 'ಜಂಗಲ್‌ರಾಜ್' ನಡವಳಿಕೆಯು ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

ಉತ್ತರ ಪ್ರದೇಶದ ಮುಖ್ಯಮಂತ್ರಿ ಸುದ್ದಿ ನೋಡುವುದನ್ನು ನಿಲ್ಲಿಸಿದ್ದಾರೆಯೇ? ವರದಿಗಳು ಗೃಹ ಇಲಾಖೆಗೆ ಹೋಗುವುದಿಲ್ಲವೇ. ಪ್ರತಿದಿನವೂ ಉತ್ತರ ಪ್ರದೇಶದಲ್ಲಿ ಗೂಂಡಾರಾಜ್‌ನ ಹೊಸ ದಾಖಲೆಗಳು ಕಾಣಿಸುತ್ತಿವೆ. ಮುಖ್ಯಮಂತ್ರಿಯವರ ಸ್ವಕ್ಷೇತ್ರದಲ್ಲೇ ಅಪಹರಣ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾಸ್‌ಗಂಜ್‌ನಲ್ಲಿ ಹತ್ಯಾಕಾಂಡವಾಗುತ್ತಿದೆ. ಆದರೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದನ್ನು ಹೊರತುಪಡಿಸಿ, ಬೇರೇನು ಆಗುತ್ತಿಲ್ಲ. ಜಂಗಲ್‌ರಾಜ್ ದರ್ಬಾರು ಹೆಚ್ಚಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.