
ಛತ್ರಪತಿ ಸಂಭಾಜಿನಗರ: ಜಾತಿಯನ್ನು ಮನಸ್ಸಿನಿಂದ ಅಳಿಸಿ ಹಾಕಿದರೆ ಮಾತ್ರ, ಸಾಮಾಜಿಕ ಆಚರಣೆಗಳಿಂದ ತಾರತಮ್ಯವನ್ನು ತೊಡೆದುಹಾಕಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಆರ್ಎಸ್ಎಸ್ನ ಶತಮಾನೋತ್ಸವದ ಹಿನ್ನೆಲೆಯಲ್ಲಿ ಛತ್ರಪತಿ ಸಂಭಾಜಿನಗರದಲ್ಲಿ ಆಯೋಜಿಸಿದ್ದ 'ಜನ ಸಂಘೋಷ್ಠಿ' ಕಾರ್ಯಕ್ರಮದಲ್ಲಿ ಮಾತನಾಡಿರುವ ಭಾಗವತ್, 'ಜಾತಿ ಎಂಬುದು ಈ ಹಿಂದೆ ವೃತ್ತಿಯೊಂದಿಗೆ ಸಂಬಂಧ ಹೊಂದಿತ್ತು. ಕಾಲಾನಂತರದಲ್ಲಿ ಅದು ಸಾಮಾಜಿಕ ವ್ಯವಸ್ಥೆಯಾಗಿ ಬೇರೂರಿ, ತಾರತಮ್ಯಕ್ಕೆ ಕಾರಣವಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ತಾರತಮ್ಯ ಕೊನೆಗೊಳಿಸಲು, ಜಾತಿಯನ್ನು ಮನಸ್ಸುಗಳಿಂದ ಕಿತ್ತೆಸೆಯಬೇಕಿದೆ. ಆ ಕೆಲಸವನ್ನು ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಮಾಡಿದರೆ, ಮುಂದಿನ 10 – 12 ವರ್ಷಗಳಲ್ಲಿ ತಾರತಮ್ಯ ನಿರ್ಮೂಲನೆಯಾಗಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕರ ಪ್ರಶ್ನೆಗಳಿಗೂ ಉತ್ತರಿಸಿದ ಭಾಗವತ್, 'ಸಮಾಜವನ್ನೂ ಮುನ್ನಡೆಸುತ್ತಾ, ಭಾರತವನ್ನು ಪರಮ ವೈಭವದತ್ತ ಕೊಂಡೊಯ್ಯುವ ಗುರಿ ಆರ್ಎಸ್ಎಸ್ನದ್ದು' ಎಂದು ತಿಳಿಸಿದ್ದಾರೆ.
ಸಂಘವು ಪ್ರತಿಯೊಬ್ಬರ ವ್ಯಕ್ತಿತ್ವ ರೂಪಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತದೆ. ಈ ಸಂಘಟನೆಯಲ್ಲಿ ಯಾವ ಸ್ಪರ್ಧೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
'ಸಂಘವನ್ನು ಅರ್ಥ ಮಾಡಿಕೊಳ್ಳಲು ಬಯಸುವವರು ಶಾಖೆಗಳಿಗೆ ಬರಬೇಕು' ಎಂದು ಆಹ್ವಾನ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.