ನವದೆಹಲಿ: ನಾಗರಿಕ ಸೇವಾ ಅಧಿಕಾರಿಗಳ ಸಾಮರ್ಥ್ಯ ಅಳೆಯುವ ಮಾನದಂಡಗಳನ್ನು ಪ್ರಶ್ನಿಸಿ ಉತ್ತರಾಖಂಡದ ಐಎಫ್ಎಸ್ ಅಧಿಕಾರಿ ಸಂಜಯ್ ಚತುರ್ವೇದಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ), ಕೋರ್ಟ್ ಸಂಖ್ಯೆ 2ಕ್ಕೆ ವರ್ಗಾಯಿಸಿದೆ.
ಸದ್ಯ, ಉತ್ತರಾಖಂಡದ ಹದ್ವಾನಿಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆಗಿರುವ ಚತುರ್ವೇದಿ ಅವರು ಕಳೆದ ವರ್ಷ ಫೆಬ್ರುವರಿಯಲ್ಲಿ ಮಂಡಳಿಯ ನೈನಿತಾಲ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಜಂಟಿ ಕಾರ್ಯದರ್ಶಿ ಮತ್ತು ಮೇಲ್ಮಟ್ಟದ ಅಧಿಕಾರಿಗಳ ಸಾಮರ್ಥ್ಯ ಓರೆಗೆ ಹಚ್ಚುವ ಕೇಂದ್ರದ 360 ಡಿಗ್ರಿ ಆಯಾಮದ ವ್ಯವಸ್ಥೆಯನ್ನು ಪ್ರಶ್ನಿಸಿದ್ದರು. ಅಲ್ಲದೆ, ಖಾಸಗಿ ವಲಯದ ಪರಿಣತರನ್ನು ಸರ್ಕಾರದಪ್ರಮುಖ ಹುದ್ದೆಗಳಿಗೆ ನೇಮಿಸುವ ಧೋರಣೆಯನ್ನು ಅವರು ಪ್ರಶ್ನಿಸಿದ್ದರು.
ಈ ಅರ್ಜಿಯ ವಿಚಾರಣೆಯನ್ನು ಈಗ ಕೋರ್ಟ್ ಸಂಖ್ಯೆ 2ಕ್ಕೆ ವರ್ಗಾಯಿಸಲಾಗಿದೆ ಎಂದು ಆದೇಶಿಸಲಾಗಿದೆ. ಸಿಎಟಿ ಕಳೆದ ತಿಂಗಳು ಕೇಂದ್ರದ ಮನವಿಯನ್ನು ಪುರಸ್ಕರಿಸಿ ಅರ್ಜಿಯನ್ನು ನೈನಿತಾಲ್ ಪೀಠದಿಂದ ದೆಹಲಿಗೆ ವರ್ಗಾಯಿಸಲು ಒಪ್ಪಿತ್ತು.
ಚತುರ್ವೇದಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಉತ್ತರಾಖಂಡ ಹೈಕೋರ್ಟ್ ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರ, ಕೇಂದ್ರ ಆಡಳಿತ ನ್ಯಾಯಮಂಡಳಿ ಮತ್ತು ಕೇಂದ್ರ ಲೋಕಸೇವಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.