ADVERTISEMENT

ಕಾವೇರಿ ನೀರಿಗಾಗಿ ತಮಿಳುನಾಡು ನಿಯೋಗ ಕೇಂದ್ರ ಸಚಿವರ ಭೇಟಿ

ಪಿಟಿಐ
Published 17 ಸೆಪ್ಟೆಂಬರ್ 2023, 17:35 IST
Last Updated 17 ಸೆಪ್ಟೆಂಬರ್ 2023, 17:35 IST
   

ಚೆನ್ನೈ: ರಾಜ್ಯಕ್ಕೆ ನಿಗದಿಪಡಿಸಿರುವ ಕಾವೇರಿ ನದಿ ನೀರಿನ ಪಾಲಿನಂತೆ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯದ ಸರ್ವ ಪಕ್ಷಗಳ ಸಂಸದರ ನಿಯೋಗವು ಸೋಮವಾರ ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲಿದೆ.

ಜಲಸಂಪನ್ಮೂಲ ಸಚಿವ ದೊರೈಮುರುಗನ್ ನೇತೃತ್ವದ ಸರ್ವ ಪಕ್ಷಗಳ ಸಂಸದರ ನಿಯೋಗವು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ಭಾನುವಾರ ತಮಿಳುನಾಡು ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ. 

ಸುಪ್ರೀಂ ಕೋರ್ಟ್ ಮತ್ತು ಕಾವೇರಿ ಜಲವಿವಾದ ನ್ಯಾಯಮಂಡಳಿ ಪ್ರಕಾರ ಕಾವೇರಿ ನೀರು ಹರಿಸುವ ವಿಚಾರದಲ್ಲಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಮತ್ತೆ ಸಮಸ್ಯೆ ಉದ್ಭವಿಸಿರುವುದರಿಂದ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲಾಗುತ್ತಿದೆ. 

ADVERTISEMENT

ನಿಯೋಗದಲ್ಲಿ ದೊರೈಮುರುಗನ್‌ ಜತೆಗೆ ಡಿಎಂಕೆ ಹಿರಿಯ ನಾಯಕ ಟಿ.ಆರ್.ಬಾಲು, ಎಐಎಡಿಎಂಕೆಯ ಎಂ. ತಂಬಿದೊರೈ ಮತ್ತು ಎನ್. ಚಂದ್ರಶೇಖರನ್, ಎಂಡಿಎಂಕೆ ಮುಖ್ಯಸ್ಥ ವೈಕೊ ಮತ್ತು ತಮಿಳು ಮಾನಿಲ ಕಾಂಗ್ರೆಸ್ ನಾಯಕ ಜಿ.ಕೆ. ವಾಸನ್ ಸೇರಿದಂತೆ ಸಿಪಿಐ, ಸಿಪಿಎಂ ಮತ್ತು ಪಿಎಂಕೆ ನಾಯಕರು ಇರುವರು.

ರಾಜ್ಯಕ್ಕೆ ಕಾವೇರಿ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ರಾಜ್ಯದ ಎಲ್ಲ ಪಕ್ಷಗಳ ಸಂಸದರು ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರವಷ್ಟೆ ಹೇಳಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.