ನವದೆಹಲಿ: ಸಿಬ್ಬಂದಿ ನೇಮಕಾತಿ ವೇಳೆ, ಆಯ್ಕೆಯಾದ ಅಭ್ಯರ್ಥಿಗಳಿಂದ ಲಂಚ ಪಡೆದ ಆರೋಪದ ಮೇಲೆ ಸೇನಾಪಡೆಯ ಇಬ್ಬರು ಹವಾಲ್ದಾರರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಪುಣೆಯಲ್ಲಿರುವ ಸೇನೆಯ ಸದರ್ನ್ ಕಮಾಂಡ್ ಗಮನಕ್ಕೆ ಇಂಥ ಪ್ರಕರಣಗಳು ನಡೆದ ಬಗ್ಗೆ ಸುಳಿವು ಸಿಕ್ಕಿತ್ತು. ಇದರ ಬೆನ್ನಲ್ಲೇ ಸೇನಾಪಡೆ ಹಾಗೂ ಸಿಬಿಐ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು ಎಂದು ಅವರು ಹೇಳಿದ್ದಾರೆ.
ಶಸ್ತ್ರಾಸ್ತ್ರ ಡಿಪೊದಲ್ಲಿ ಸಿಬ್ಬಂದಿ ನೇಮಕಾತಿಗಾಗಿ ಪರೀಕ್ಷೆ ನಡೆದಿತ್ತು. ಆರೋಪಿಗಳು ಈ ಶಸ್ತ್ರಾಸ್ತ್ರ ಡಿಪೊದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಕರೆ ಮಾಡುತ್ತಿದ್ದರು. ಉತ್ತರ ಪತ್ರಿಕೆಗಳು ಅಪೂರ್ಣವಾಗಿರುವ ಕಾರಣ ನಿಮ್ಮ ನೇಮಕಾತಿಯನ್ನು ರದ್ದುಗೊಳಿಸಲಾಗುವುದು ಎಂಬುದಾಗಿ ಅವರಿಗೆ ಬೆದರಿಕೆವೊಡ್ಡುತ್ತಿದ್ದ ಅವರು, ಹಣ ನೀಡಿದರೆ ನೇಮಕಾತಿ ಪತ್ರ ರವಾನಿಸುವುದಾಗಿ ಭರವಸೆ ನೀಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.