ADVERTISEMENT

₹1,530 ಕೋಟಿ ವಂಚನೆ: ಪ್ರಕರಣ ದಾಖಲಿಸಿದ ಸಿಬಿಐ

ಎಸ್‌ಇಎಲ್‌ ಟೈಕ್ಸ್‌ಟೈಲ್ಸ್‌ ಕಂಪನಿ ನಿರ್ದೇಶಕರ ವಿರುದ್ಧ ಎಫ್‌ಐಆರ್‌

ಪಿಟಿಐ
Published 17 ಆಗಸ್ಟ್ 2020, 16:05 IST
Last Updated 17 ಆಗಸ್ಟ್ 2020, 16:05 IST

ನವದೆಹಲಿ: ಬ್ಯಾಂಕ್‌ಗಳ ಒಕ್ಕೂಟಕ್ಕೆ ಅಂದಾಜು ₹1,350 ಕೋಟಿ ವಂಚನೆ ಎಸಗಿದ ಆರೋಪದಡಿ ಲುಧಿಯಾನಾ ಮೂಲದ ಎಸ್‌ಇಎಲ್‌ ಟೆಕ್ಸ್‌ಟೈಲ್ಸ್‌ ಲಿಮಿಟೆಡ್‌ ಮತ್ತು ಅದರ ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಕಂಪನಿಯ ನಿರ್ದೇಶಕರಾದ ರಾಮ್‌ ಶರಣ್‌ ಸಲುಜ, ನೀರಜ್‌ ಸಲುಜ ಹಾಗೂ ಧೀರಜ್‌ ಸಲುಜ ಅವರನ್ನು ಆರೋಪಿಗಳನ್ನಾಗಿ ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ನೀಡಿದ್ದ ದೂರನ್ನು ಆಧರಿಸಿ ಸಿಬಿಐ ತನಿಖೆ ಆರಂಭಿಸಿತ್ತು.ಅಪರಾಧ ಪಿತೂರಿ ನಡೆಸಿ ಒಕ್ಕೂಟದ 10 ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಿಗೆ ವಂಚನೆ ಮಾಡಿದ್ದ ಕಂಪನಿಯು 2009ರಿಂದ 2013ರ ಅವಧಿಯಲ್ಲಿ ಅಂದಾಜು ₹1,530 ಕೋಟಿ ಸಾಲವನ್ನು ಇತರೆ ಉದ್ದೇಶಗಳಿಗೆ ಬಳಸಿಕೊಂಡಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ರಾಮ್ ಶರಣ್‌ ಹಾಗೂ ನೀರಜ್‌ ಭಾರತದಲ್ಲಿದ್ದು, ಧೀರಜ್‌ ವಿದೇಶದಲ್ಲಿ ಇದ್ದುಕೊಂಡು ಕಂಪನಿಯ ಅಲ್ಲಿನ ಉದ್ಯಮವನ್ನು ನೋಡಿಕೊಳ್ಳುತ್ತಿದ್ದಾನೆ. ಈ ಕಾರಣದಿಂದ ಆರೋಪಿಗಳ ಪಾಸ್‌ಪೋರ್ಟ್‌ ಜಪ್ತಿ ಮಾಡಬೇಕು ಎಂದು ಸಿಬಿಐಗೆ ಮನವಿ ಮಾಡಿತ್ತು.

ADVERTISEMENT

2014ರಲ್ಲಿ ಮೊದಲ ಬಾರಿಗೆ ಸೆಂಟ್ರಲ್ ಬ್ಯಾಂಕ್‌ ಆಫ್‌ ಇಂಡಿಯಾ ಕಂಪನಿಯ ಎನ್‌ಪಿಎ(ನಾನ್‌ ಪರ್ಫಾರ್ಮಿಂಗ್‌ ಅಸೆಟ್‌) ಘೋಷಿಸಿತ್ತು. ಇದಾದ ಬಳಿಕ ಹಲವು ಬ್ಯಾಂಕ್‌ಗಳು ಮಾಹಿತಿ ನೀಡಿದ್ದವು. ‘ಎನ್‌ಪಿಎ ಘೋಷಿಸಿದ ಬಳಿಕ ಬ್ಯಾಂಕ್‌ಗಳು ನಡೆಸಿದ ಲೆಕ್ಕಪರಿಶೋಧನೆ ವೇಳೆ ಸಾಲವನ್ನು ಇತರೆ ಉದ್ದೇಶಗಳಿಗೆ ಬಳಸಿಕೊಂಡಿರುವುದು ಪತ್ತೆಯಾಗಿತ್ತು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.