ನವದೆಹಲಿ:ದೆಹಲಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಎಎಪಿ ನೇತೃತ್ವದ ಸರ್ಕಾರವು 1,000 ಬಸ್ ಖರೀದಿಯಲ್ಲಿ ಅವ್ಯವಹಾರ ನಡೆಸಿದೆ ಎಂಬ ಆರೋಪದ ಬಗ್ಗೆ ಸಿಬಿಐ ಪ್ರಾಥಮಿಕ ತನಿಖೆ ನಡೆಸುತ್ತಿದೆ. ಪೂರ್ವಭಾವಿ ತನಿಖೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದರೆ ಸಿಬಿಐ ಪ್ರಕರಣ ದಾಖಲಿಸಿಕೊಳ್ಳಲಿದೆ.
ಬಸ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ದೆಹಲಿಯ ಬಿಜೆಪಿ ಘಟಕವು ಕಳೆದ ವರ್ಷ ಸಲ್ಲಿಸಿದ್ದ ದೂರು ಆಧರಿಸಿ, ಹಿಂದಿನ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ತನಿಖೆಗೆ ಆದೇಶಿಸಿದ್ದರು. ₹890 ಕೋಟಿ ಮೌಲ್ಯದ ಸಾವಿರ ಬಸ್ ಖರೀದಿ ಹಾಗೂ ಬಸ್ಗಳ ನಿರ್ವಹಣೆಗೆ ₹350 ಕೋಟಿ ವೆಚ್ಚ ಮಾಡುವ ದೆಹಲಿ ಸರ್ಕಾರದ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ಈ ಎರಡೂ ಗುತ್ತಿಗೆಯನ್ನು ಒಂದೇ ಕಂಪನಿಗೆ ನೀಡಲಾಗಿದ್ದು, 12 ವರ್ಷಗಳ ನಿರ್ವಹಣೆಗೆ ₹3,412 ಕೋಟಿ ವೆಚ್ಚವಾಗಲಿದೆ ಎಂದು ಬಿಜೆಪಿ ಹೇಳಿತ್ತು. ಹೀಗಾಗಿ ದೆಹಲಿ ಸರ್ಕಾರವು ಬಸ್ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು.
ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ವರ್ಗಾಯಿಸಲಾಗಿತ್ತು. ಗೃಹ ಸಚಿವಾಲಯವು ಸಿಬಿಐ ತನಿಖೆಗೆ ಸೂಚಿಸಿತ್ತು. ಸಿಬಿಐ ತನಿಖೆ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಎಎಪಿ ಆರೋಪಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.