ADVERTISEMENT

ಪೊಲೀಸ್‌ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಗೆಹ್ಲೊಟ್‌ ವಿಶೇಷಾಧಿಕಾರಿ ಸಿಬಿಐ ವಿಚಾರಣೆ

ಪಿಟಿಐ
Published 21 ಜುಲೈ 2020, 7:30 IST
Last Updated 21 ಜುಲೈ 2020, 7:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪೊಲೀಸ್‌ ಅಧಿಕಾರಿ ವಿಷ್ಣುದತ್ತ ವೈಷ್ಣೋಯಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನ ವಿಶೇಷ ಅಪರಾಧ ಘಟಕದ ಅಧಿಕಾರಿಗಳು ಮಂಗಳವಾರ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ವಿಶೇಷಾಧಿಕಾರಿ ದೇವರಾಮ್‌ ಸೈನಿ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ರಾಜಗಡದಲ್ಲಿ ಎಸ್‌ಎಚ್‌ಒ ಆಗಿದ್ದ ವೈಷ್ಣೋಯಿ ಅವರು, ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ‘ವೈಷ್ಣೋಯಿ ಮೇಲೆ ವಿಪರೀತ ಒತ್ತಡವಿತ್ತು. ಅದನ್ನು ತಾಳಲಾಗದೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಅವರ ಸಹೋದರ ದೂರಿದ್ದರು.

‘ರಾಜ್ಯ ಸರ್ಕಾರವು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು. ಸಂಸ್ಥೆಯು ವೃತ್ತಿಪರ ರೀತಿಯಲ್ಲಿ ತನಿಖೆ ನಡೆಸುತ್ತಿದೆ. ತಂಡವು ಸೋಮವಾರ ಸಂಜೆ ಕಾಂಗ್ರೆಸ್‌ ಶಾಸಕ ಕೃಷ್ಣ ಪೂನಿಯಾ ಅವರನ್ನೂ ಮೂರು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು. ಇವರನ್ನು ಆರೋಪಿಗಳು ಎನ್ನಲಾಗದು, ಪ್ರಕರಣದ ವಿವಿಧ ಆಯಾಮಗಳನ್ನು ತಿಳಿಯಲು ಈ ವಿಚಾರಣೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರವೇ ಸ್ಪಷ್ಟ ಚಿತ್ರಣ ಬರಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ವೈಷ್ಣೋಯಿ ಅವರ ಮನೆಯಿಂದ ಎರಡು ಪತ್ರಗಳು ಲಭಿಸಿದ್ದವು. ಒಂದು ತಮ್ಮ ಪಾಲಕರಿಗೆ ಬರೆದದ್ದು, ಇನ್ನೊಂದು ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಗೆ ಬರೆದದ್ದಾಗಿತ್ತು. ‘ಇಲಾಖೆಗೆ ಅತ್ಯುತ್ತಮ ಸೇವೆ ನೀಡಲು ಶ್ರಮಿಸಿದ್ದೇನೆ. ಆದರೆ ಒತ್ತಡ ಹೆಚ್ಚಾಗುತ್ತಿದ್ದು, ಅದನ್ನು ತಾಳಲಾರದೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಪತ್ರದಲ್ಲಿ ಬರೆಯಲಾಗಿತ್ತು.

ರಾಜಸ್ಥಾನದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿರುವ ಸಂದರ್ಭದಲ್ಲೇ ನಡೆದಿರುವ ಈ ಬೆಳವಣಿಗೆಯು ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.