ADVERTISEMENT

6 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮನವಿ

ಐಎಂಎ ಹಗರಣ: ಇಬ್ಬರು ಐಪಿಎಸ್‌ ಅಧಿಕಾರಿಗಳು ಸೇರಿ ಆರು ಮಂದಿ ವಿರುದ್ಧ ಪೂರಕ ಆರೋಪಪಟ್ಟಿಗೆ ಸಿದ್ಧತೆ

ಪಿಟಿಐ
Published 19 ಡಿಸೆಂಬರ್ 2019, 19:44 IST
Last Updated 19 ಡಿಸೆಂಬರ್ 2019, 19:44 IST
s
s   

ನವದೆಹಲಿ: ಐ ಮಾನಿಟರಿ ಅಡ್ವೈಸರಿ (ಐಎಂಎ) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಐಪಿಎಸ್‌ ಅಧಿಕಾರಿಗಳು ಸೇರಿದಂತೆ ಆರು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಸಿಬಿಐ ಮನವಿ ಮಾಡಿದೆ.

ಸಿಬಿಐ ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. 1998ನೇ ತಂಡದ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್ ಮತ್ತು 2008ನೇ ತಂಡದ ಐಪಿಎಸ್‌ ಅಧಿಕಾರಿ ಅಜಯ್‌ ಹಿಲೋರಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಅನುಮತಿ ಕೋರಲಾಗಿದೆ.

ಹಗರಣ ಬೆಳಕಿಗೆ ಬಂದಾಗ ನಿಂಬಾಳ್ಕರ್ ಆರ್ಥಿಕ ಅಪರಾಧಗಳ ವಿಭಾಗದ ಇನ್‌ಸ್ಪೆಕ್ಟರ್‌ ಜನರಲ್‌ (ಐಜಿ) ಆಗಿದ್ದರು. ಹಿಲೋರಿ ಅವರು ಬೆಂಗಳೂರು ಪೂರ್ವ ವಲಯದ ಡಿಸಿಪಿ ಆಗಿದ್ದರು.

ADVERTISEMENT

ಈ ಐಪಿಎಸ್‌ ಅಧಿಕಾರಿಗಳಲ್ಲದೇ, ಈ ಹಿಂದೆ ಸಿಐಡಿ ಡಿವೈಎಸ್‌ಪಿ ಆಗಿದ್ದ ಇ.ಬಿ.ಶ್ರೀಧರ, ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಎಂ. ರಮೇಶ್‌, ಸಬ್ ಇನ್‌ಸ್ಪೆಕ್ಟರ್ ಪಿ.ಗೌರಿಶಂಕರ್‌, ಆಗಿನ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ವಿರುದ್ಧ ಕ್ರಮ ಜರುಗಿಸಲು ಅನುಮತಿ ಕೋರಲಾಗಿದೆ.

ಸಿಐಡಿ ಆರ್ಥಿಕ ಅಪರಾಧ ವಿಭಾಗ ಐಎಂಎ ಸಮೂಹ ಚಟುವಟಿಕೆಗಳ ಬಗ್ಗೆ ತನಿಖೆ ಕೈಗೊಂಡಾಗ ಶ್ರೀಧರ್‌ ತನಿಖಾಧಿಕಾರಿಯಾಗಿದ್ದರು ಮತ್ತು ಹೇಮಂತ್‌ ನಿಂಬಾಳ್ಕರ್‌ ಉಸ್ತುವಾರಿ ಅಧಿಕಾರಿಯಾಗಿದ್ದರು. ‘ಕರ್ನಾಟಕ ಸರ್ಕಾರ ಅನುಮೋದನೆ ನೀಡುತ್ತಿದ್ದಂತೆ ಈ ಆರು ಜನರ ವಿರುದ್ಧವೂ ಪೂರಕ ದೋಷಾರೋಪ ಪಟ್ಟಿ ದಾಖಲಿಸಲಾಗುವುದು’ ಎಂದು ಸಿಬಿಐ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.