ADVERTISEMENT

ಪ್ರಸಾರ ಚಟುವಟಿಕೆ ನಿಲ್ಲಿಸಿ: ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ

ಅಧಿಕೃತ ಪ್ರಕಟಣೆ ಹೊರಡಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಪಿಟಿಐ
Published 22 ಅಕ್ಟೋಬರ್ 2022, 19:31 IST
Last Updated 22 ಅಕ್ಟೋಬರ್ 2022, 19:31 IST
ಪ್ರಸಾರ ಭಾರತಿ
ಪ್ರಸಾರ ಭಾರತಿ   

ನವದೆಹಲಿ: ‘ಇನ್ನು ಮುಂದೆ ಯಾವುದೇ ಬಗೆಯ ಪ್ರಸಾರ ಚಟುವಟಿಕೆಗಳಲ್ಲಿ ನೇರವಾಗಿ ತೊಡಗಿಕೊಳ್ಳುವಂತಿಲ್ಲ. ಈಗಾಗಲೇ ಭಾಗಿಯಾಗಿದ್ದರೆ ಅದನ್ನು ನಿಲ್ಲಿಸಬೇಕು’ ಎಂದು ಕೇಂದ್ರ ಸರ್ಕಾರವು ಕೇಂದ್ರದ ಸಚಿವಾಲಯಗಳು, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಸಂಬಂಧ ಶುಕ್ರವಾರ ಅಧಿಕೃತ ಪ್ರಕಟಣೆಯನ್ನೂ ಹೊರಡಿಸಿದೆ.

‘ಸಚಿವಾಲಯಗಳು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಏನೇ ಪ್ರಸಾರ ಮಾಡಬೇಕಿದ್ದರೂ ಪ್ರಸಾರ ಭಾರತಿ ಮಾರ್ಗವಾಗಿಯೇ ಕೈಗೊಳ್ಳಬೇಕು. ಈಗಾಗಲೇ ಪ್ರಸಾರ ಚಟುವಟಿಕೆ ನಡೆಸುತ್ತಿದ್ದರೆ ಅದನ್ನು 2023ರ ಡಿಸೆಂಬರ್‌ 31ರೊಳಗೆ ನಿಲ್ಲಿಸಬೇಕು’ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿರುವ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಕೇಂದ್ರದ ಈ ಪ್ರಕಟಣೆಯಿಂದಾಗಿ ತಮಿಳುನಾಡು ಸರ್ಕಾರದ ಶೈಕ್ಷಣಿಕ ವಾಹಿನಿ ಕಳವಿ ಟಿವಿ ಹಾಗೂ ಆಂಧ್ರಪ್ರದೇಶ ಸರ್ಕಾರ ನಡೆಸುತ್ತಿರುವ ಐಪಿ ಟಿವಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಅವುಗಳ ಸಹಭಾಗಿತ್ವದ ಕಂಪನಿಗಳು ಪ್ರಸಾರ ಉದ್ಯಮದಲ್ಲಿ ಭಾಗಿಯಾಗಲು ಅವಕಾಶ ನೀಡಬಾರದೆಂದುಭಾರತೀಯ ದೂರ ಸಂಪ‍ರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) 2012ರಲ್ಲಿ ಶಿಫಾರಸು ಮಾಡಿತ್ತು. ಟ್ರಾಯ್‌ನ ಶಿಫಾರಸನ್ನು ಸರ್ಕಾರ ಪರಿಗಣಿಸಿದೆ’ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.