ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿದ್ದು, ವಾತಾವರಣಕ್ಕೆ ಹಾನಿಯಾಗದಂತೆ ಹಬ್ಬಗಳನ್ನು ಆಚರಿಸುವಂತೆ ಸಾಮಾಜಿಕ ಸಂಘಟನೆಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಒತ್ತಾಯಿಸಿದ್ದಾರೆ.
ಅಂತರರಾಷ್ಟ್ರೀಯ ಆರ್ಯ ಸಮಾವೇಶ–2018ರಲ್ಲಿ ಮಾತನಾಡಿದ ಅವರು,‘ಇದು ಚಳಿಗಾಲದ ಹಬ್ಬಗಳು ನಡೆಯುವ ಸಮಯ. ಮಾಲಿನ್ಯ ಪ್ರಮಾಣ ಹೆಚ್ಚಳವಾಗುತ್ತಿರುವುದರಿಂದಾಗಿ ದೆಹಲಿಯಂತಹ ನಗರಗಳಲ್ಲಿನ ಜನರು ಈಗಾಗಲೇ ಉಸಿರಾಟದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಪರಿಸರಕ್ಕೆ ಹಾನಿಯಾಗದಂತೆ ಹಾಗೂ ಶಾಂತಿ, ಸಾಮರಸ್ಯ ಕಾಪಾಡುವಂತೆ ಹಬ್ಬಗಳನ್ನು ಆಚರಿಸುವಂತೆ ಸಾಮಾಜಿಕ ಸಂಘಟನೆಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಮಾಡಬೇಕು’ ಎಂದು ಮನವಿ ಮಾಡಿದ್ದಾರೆ.
ಕಳೆದ ಕೆಲವು ವಾರಗಳಿಂದ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹಾಳಾಗಿದೆ. ಹೀಗಾಗಿ ಅಲ್ಲಿನಅಧಿಕಾರಿಗಳು ಪರಿಸರ ಸ್ನೇಹಿ ಆಚರಣೆಗಳನ್ನು ನಡೆಸುವಂತೆ ಪದೇಪದೆ ಮನವಿ ಮಾಡಿದ್ದರು. ಆದಾಗ್ಯೂ ದಸರಾ ಉತ್ಸವದ ಸಂದರ್ಭದಲ್ಲಿ ಪಟಾಕಿಗಳನ್ನು ಹಚ್ಚಲಾಗಿತ್ತು.
ಅಕ್ಕಪಕ್ಕದ ರಾಜ್ಯಗಳಲ್ಲಿನ ರೈತರು ಬಿತ್ತನೆಗೆ ಸಿದ್ಧತೆ ನಡೆಸುವ ಸಂದರ್ಭದಲ್ಲಿಬೆಳೆ ಕಟಾವಿನ ಬಳಿಕ ಹೊಲದಲ್ಲಿ ಉಳಿದ ತ್ಯಾಜ್ಯಕ್ಕೆ ಬೆಂಕಿ ಹಾಕುವುದೂ ಕೂಡ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಲು ಕಾರಣವಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.