ನವದೆಹಲಿ: ಮಳೆ ನೀರು ಸಂಗ್ರಹ ಕುರಿತು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ನಡೆಸಲು ಘಟಕ ಸ್ಥಾಪಿಸಬೇಕು ಹಾಗೂ ಸಂಬಂಧಪಟ್ಟ ಆಯಾ ಪ್ರದೇಶಗಳಲ್ಲಿ ಕನಿಷ್ಠ ಒಂದು ಜಲಮೂಲವನ್ನು ಪುನರುಜ್ಜೀವನಗೊಳಿಸಲುನಗರ ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು ಎಂದು ಕೇಂದ್ರ ಹೇಳಿದೆ.
ನಗರ ಸ್ಥಳೀಯ ಸಂಸ್ಥೆಗಳ ಮಳೆ ನೀರು ಸಂಗ್ರಹ ಘಟಕಗಳು ಅಂತರ್ಜಲ ಹೊರತೆಗೆಯುವಿಕೆಯನ್ನು ಮತ್ತು ಅಂತರ್ಜಲ ಮರುಪೂರಣ ಕುರಿತು ಮೇಲ್ವಿಚಾರಣೆ ನಡೆಸಲಿದೆ ಎಂದು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ‘ನಗರ ನೀರು ಸಂರ
ಕ್ಷಣೆಗಾಗಿ ಮಾರ್ಗಸೂಚಿ‘ಯಲ್ಲಿ ತಿಳಿಸಿದೆ.
ಸಾರ್ವಜನಿಕರಿಗಾಗಿ ಈ ಕುರಿತ ಮಾಹಿತಿಯನ್ನು ಸೂಕ್ತ ಸ್ಥಳದಲ್ಲಿ ಪ್ರದರ್ಶಿಸಬೇಕು ಎಂದೂ ಸಚಿವಾಲಯ ಹೇಳಿದೆ.
ಜುಲೈ 1 ರಿಂದ ಸೆಪ್ಟೆಂಬರ್ 15ರ ವರೆಗೆ ನಡೆಯುವ ‘ಜಲ ಶಕ್ತಿ ಅಭಿಯಾನದ‘ ಮೊದಲ ಹಂತದ ಅಂಗವಾಗಿ ಈ ಮಾರ್ಗಸೂಚಿಗಳನ್ನು ನೀಡಲಾಗಿದೆ. 2ನೇ ಹಂತವು ಅಕ್ಟೋಬರ್ 1 ರಿಂದ ನವೆಂಬರ್ 30ರ ವರೆಗೆ ನಡೆಯಲಿದೆ.
‘ಮಳೆ ನೀರು ಸಂಗ್ರಹ ವ್ಯವಸ್ಥೆ ಇದ್ದರೆ ಮಾತ್ರ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕು. ನಿರ್ಮಾಣ ಮುಗಿದ ಮೇಲೆ ಈ ಸೌಕರ್ಯ ಇರುವುದನ್ನು ಪರಿಶಿಲಿಸಿದ ನಂತರವೇ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ ನೀಡಬೇಕು. ಜಲ ಶಕ್ತಿ ಅಭಿಯಾನದ ಸಂದರ್ಭದಲ್ಲಿ ಪ್ರತಿ ನಗರವು ಜಲಮೂಲಗಳ ಪುನರುಜ್ಜೀವನಕ್ಕೆ ಮುಂದಾಗಲೇಬೇಕು. ಜಲಮೂಲಗಳನ್ನು ಗುರುತಿಸಿ, ಸಾರ್ವಜನಿಕರ ಸಲಹೆ ಪಡೆದು ಪುನರುಜ್ಜೀವನಕ್ಕೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಸಚಿವಾಲಯ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.