ADVERTISEMENT

ಗುಣಮಟ್ಟದ ಖಾತರಿಗೆ ಕುಡಿಯುವ ನೀರು ಪರೀಕ್ಷೆ: ರಾಜ್ಯಗಳಿಗೆ ಕೇಂದ್ರ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಮೇ 2021, 14:29 IST
Last Updated 18 ಮೇ 2021, 14:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕುಡಿಯುವ ಉದ್ದೇಶಕ್ಕಾಗಿ ಗ್ರಾಮಗಳಿಗೆ ಪೂರೈಸುತ್ತಿರುವ ನೀರು ಗುಣಮಟ್ಟದ್ದಾಗಿದೆ ಎಂಬುದರ ಖಾತರಿಗಾಗಿ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಬೇಕು ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸೂಚನೆ ನೀಡಿದೆ.

ಕೋವಿಡ್‌ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜಲಜೀವನ ಮಿಷನ್‌ (ಎನ್‌ಜೆಜೆಎಂ) ಇದಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.

ದೇಶದಾದ್ಯಂತ ಎಲ್ಲ ಗ್ರಾಮಗಳಲ್ಲಿ ನೀರಿನ ಪರೀಕ್ಷೆ ನಡೆಸಬೇಕು. ಸಾರ್ವಜನಿಕರು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಗುಣಮಟ್ಟದ ನೀರು ಪೂರೈಕೆಯಾಗುತ್ತಿದೆ ಎಂಬ ಬಗ್ಗೆ ಕ್ರಮವಹಿಸಬೇಕು ಎಂದು ಸಲಹೆ ಮಾಡಿದೆ.

ADVERTISEMENT

ಹಲವು ನದಿಗಳಲ್ಲಿ ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಶವಗಳು ಹಾಗೂ ಭಾಗಶಃ ಸುಟ್ಟ ದೇಹಗಳು ತೇಲುತ್ತಿವೆ ಎಂಬ ಬೆಳವಣಿಗೆಯ ಹಿಂದೆಯೇ ಸಚಿವಾಲಯದ ಈ ಸಲಹೆ ಹೊರಬಿದ್ದಿದೆ.

ನದಿಯಲ್ಲಿ ಹೆಣಗಳು ತೇಲುತ್ತಿರುವ ಪ್ರಕರಣ ವರದಿಯಾದ ಬಳಿಕ, ಇದರಿಂದಾಗಿ ನೀರು ಕಲುಷಿತಗೊಂಡು ಸೋಂಕು ಸಾಂಕ್ರಾಮಿಕವಾಗಿ ಹರಡಬಹುದು ಎಂದು ಆರೋಗ್ಯ ಪರಿಣತರು ಎಚ್ಚರಿಸಿದ್ದರು.

ಕೋವಿಡ್‌ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಗುಣಮಟ್ಟದ ನೀರು ಪೂರೈಕೆಯನ್ನು ಖಾತರಿಪಡಿಸಿಕೊಳ್ಳುವುದು ಅಗತ್ಯ. ಸ್ಯಾನಿಟೈಸ್‌ ವ್ಯವಸ್ಥೆ ಉತ್ತಮಪಡಿಸುವುದು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ ಎಂದು ಸಚಿವಾಲಯವು ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.