ADVERTISEMENT

ಗಡಿಯಲ್ಲಿ ಸರಕು ಸಾಗಣೆಗೆ ಅನುಮತಿ ನಿರಾಕರಣೆ: ಪ.ಬಂಗಾಳದ ವಿರುದ್ಧ ಕೇಂದ್ರ ಟೀಕೆ

ಪಿಟಿಐ
Published 7 ಮೇ 2020, 0:57 IST
Last Updated 7 ಮೇ 2020, 0:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತ- ಬಾಂಗ್ಲಾದೇಶ ಗಡಿ ಮೂಲಕ ಅಗತ್ಯ ಸರಕುಗಳನ್ನು ಸಾಗಿಸಲು ಅನುಮತಿ ನೀಡದ ಪಶ್ಚಿಮ ಬಂಗಾಳ ಸರ್ಕಾರವನ್ನು ಕೇಂದ್ರ ಸರ್ಕಾರ ತೀವ್ರವಾಗಿ ಟೀಕಿಸಿದೆ.

ಪಶ್ಚಿಮ ಬಂಗಾಳದ ಈ ನಡೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸರಕು ಸಾಗಣೆ ವಾಹನ ಸಂಚಾರಕ್ಕೆ ಅನುಮತಿ ನೀಡುವಂತೆ ಕೇಂದ್ರ ಹಲವು ಬಾರಿ ನಿರ್ದೇಶನ ನೀಡಿದ್ದರೂ ಅದು ಜಾರಿಗೆ ಬಂದಿಲ್ಲ. ಇದುವಿಪತ್ತು ನಿರ್ವಹಣಾ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ADVERTISEMENT

ಈ ಸಂಬಂಧ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಕಾರ್ಯದರ್ಶಿ, ‘ಭಾರತ–ನೇಪಾಳ, ಭಾರತ– ಭೂತಾನ್‌ ಮತ್ತು ಭಾರತ– ಬಾಂಗ್ಲಾದೇಶ ಗಡಿಗಳಲ್ಲಿ ಅಗತ್ಯ ಸರಕುಗಳ ಸಾಗಣಿಕೆಗೆ ಅನುಮತಿ ನೀಡುವಂತೆ ಏಪ್ರಿಲ್‌ 24ರಂದು ನಿರ್ದೇಶನ ನೀಡಲಾಗಿತ್ತು. ಅಲ್ಲದೇ ಈ ಕುರಿತು ವರದಿ ಸಲ್ಲಿಸುವಂತೆ ತಿಳಿಸಲಾಗಿತ್ತು. ಆದರೆ ಇಲ್ಲಿಯವರೆಗೂ ವರದಿ ಬಂದಿಲ್ಲ’ ಎಂದು ಹೇಳಿದ್ದಾರೆ.

ಲಾಕ್‌ಡೌನ್‌ ಸಂಬಂಧಿತ ಹೊಸ ಮಾರ್ಗಸೂಚಿಯ ಪ್ರಕಾರ, ನೆರೆಹೊರೆಯ ದೇಶಗಳೊಂದಿಗೆ ಮಾಡಿಕೊಂಡ ಒಪ್ಪಂದದನ್ವಯ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವು ಸರಕು ಸಾಗಣೆ ವಾಹನಗಳಿಗೆ ನಿರ್ಬಂಧ ವಿಧಿಸುವಂತಿಲ್ಲ ಎಂಬುದನ್ನು ಗೃಹ ಕಾರ್ಯದರ್ಶಿ ಉಲ್ಲೇಖಿಸಿದ್ದಾರೆ.

‘ಭಾರತ-ಬಾಂಗ್ಲಾ ಗಡಿಯಲ್ಲಿ ನೂರಾರು ಟ್ರಕ್‌ಗಳು ಸಾಲುಗಟ್ಟಿ ನಿಂತಿವೆ. ಗಡಿ ದಾಟಲು ಅನುಮತಿ ಸಿಗದೇ, ದೇಶದ ಚಾಲಕರು ಸಮಸ್ಯೆಗೆ ಸಿಲುಕಿದ್ದಾರೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.