ADVERTISEMENT

ಉಚಿತ ಪಡಿತರ ವಿತರಣೆ ಮತ್ತೆ 6 ತಿಂಗಳು ವಿಸ್ತರಣೆ: ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 19:46 IST
Last Updated 26 ಮಾರ್ಚ್ 2022, 19:46 IST
ನರೇಂದ್ರ ಮೋದಿ
ನರೇಂದ್ರ ಮೋದಿ    

ನವದೆಹಲಿ: ದೇಶದ ಬಲಿಷ್ಠತೆ ಪ್ರತಿ ನಾಗರಿಕನ ಶಕ್ತಿಯ ಮೇಲೆ ನಿಂತಿದೆ. ಹಾಗಾಗಿ ಉಚಿತ ಆಹಾರಧಾನ್ಯ ವಿತರಿಸುವ ಯೋಜನೆಯನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿಳಿಸಿದರು.

ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (ಪಿಎಂಜಿಕೆಎವೈ) ಇದೇ ವರ್ಷದ ಸೆಪ್ಟೆಂಬರ್‌ವರೆಗೆ ವಿಸ್ತರಿಸಲಾಗುತ್ತಿದ್ದು,80 ಕೋಟಿಗೂ ಹೆಚ್ಚು ನಾಗರಿಕರು ಮೊದಲಿನಂತೆಯೇ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಮೋದಿ ಅವರು ಹೇಳಿದರು.

ADVERTISEMENT

ಕೊರೊನಾ ಪಿಡುಗಿನ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಿಂದ ಪಿಎಂಜಿಕೆಎವೈ ಪ್ರಾರಂಭಿಸಲಾಗಿದೆ.

ಉತ್ತರಪ್ರದೇಶದಲ್ಲೂ ಮೂರು ತಿಂಗಳು ವಿಸ್ತರಣೆ (ಲಖನೌ ವರದಿ): ಇದಕ್ಕೂ ಮೊದಲು, ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಆರಂಭಿಸಲಾಗಿದ್ದ ಉಚಿತ ಪಡಿತರ ಯೋಜನೆಯನ್ನು ಇನ್ನೂ ಮೂರು ತಿಂಗಳು ಮುಂದುವರಿಸಲು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸಚಿವ ಸಂಪುಟವು ಶನಿವಾರ ನಿರ್ಧರಿಸಿದೆ.

ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಯೋಗಿ ನೇತೃತ್ವದ ಸಚಿವ ಸಂಪುಟದ ಮೊದಲ ಪ್ರಮುಖ ನಿರ್ಧಾರ ಇದು. ಉಚಿತ ಪಡಿತರ ಯೋಜನೆಯು ಮಾರ್ಚ್‌ ತಿಂಗಳಲ್ಲಿ ಕೊನೆಗೊಳ್ಳಬೇಕಿತ್ತು. ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣೆಯ ವರೆಗೆ ಉಚಿತ ಪಡಿತರ ಯೋಜನೆಯು ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.