ನವದೆಹಲಿ: ಕೋವಿಡ್–19ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲು ರಾಜ್ಯ ವಿಕೋಪ ಸ್ಪಂದನೆ ನಿಧಿಗೆ (ಎಸ್ಡಿಆರ್ಎಫ್) ಸಂಬಂಧಿಸಿದ ತನ್ನ ಪಾಲಿನ ಎರಡನೇ ಕಂತಿನ ಮೊತ್ತ ₹7,274 ಕೋಟಿಯನ್ನು 23 ರಾಜ್ಯಗಳಿಗೆ ಮುಂಗಡವಾಗಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.
ಕೋವಿಡ್–19ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಕೋರಿ ಕೆಲವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನಂತರ, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಕೋವಿಡ್ ಸಂತ್ರಸ್ತರ ಕುಟಂಬಗಳಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ಕೇಂದ್ರ ಸರ್ಕಾರ ಕಳೆದ ತಿಂಗಳು ಸುಪ್ರೀಂಕೋರ್ಟ್ಗೆ ಹೇಳಿತ್ತು.
ಎಸ್ಡಿಆರ್ಎಫ್ ಅಡಿಯಲ್ಲಿ ಮಾನದಂಡಗಳನ್ನು ಪರಿಷ್ಕರಿಸಿ ಕೋವಿಡ್ನಿಂದ ಮೃತರಾದವರ ಹತ್ತಿರದ ಸಂಬಂಧಿಕರಿಗೆ ಎಕ್ಸ್ ಗ್ರೇಷಿಯಾ ಪಾವತಿಸುವ ಸಂಬಂಧ ಕೇಂದ್ರ ಸರ್ಕಾರ ಸೆಪ್ಟೆಂಬರ್ 25 ರಂದು ಆದೇಶ ಹೊರಡಿಸಿತ್ತು.
ಐದು ರಾಜ್ಯಗಳಿಗೆ ಈಗಾಗಲೇ ಎರಡನೇ ಕಂತಿನ ಮೊತ್ತ ₹1,599 ಕೋಟಿ ಬಿಡುಗಡೆ ಮಾಡಲಾಗಿದೆ ಎಂದೂ ಕೇಂದ್ರ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.