ADVERTISEMENT

ಸಿಬಿಐಗೆ ಕಾಯಂ ನಿರ್ದೇಶಕರನ್ನು ನೇಮಿಸಿ

ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತಾಕೀತು

ಪಿಟಿಐ
Published 1 ಫೆಬ್ರುವರಿ 2019, 20:15 IST
Last Updated 1 ಫೆಬ್ರುವರಿ 2019, 20:15 IST
   

ನವದೆಹಲಿ: ಸಿಬಿಐಗೆ ಮಧ್ಯಂತರ ನಿರ್ದೇಶಕರನ್ನು ನೇಮಕ ಮಾಡುವುದು ವ್ಯವಸ್ಥೆಗೆ ವಿರುದ್ಧವಾದುದು. ಆದ್ದರಿಂದ ಅತ್ಯುನ್ನತ ತನಿಖಾ ಸಂಸ್ಥೆಗೆ ಪೂರ್ಣ ಪ್ರಮಾಣದ ನಿರ್ದೇಶಕರನ್ನು ಕೂಡಲೇ ನೇಮಕ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಾಕೀತು ಮಾಡಿದೆ.

ಸಿಬಿಐ ನಿರ್ದೇಶಕರ ಹುದ್ದೆ ‘ಸೂಕ್ಷ್ಮ’ ಮತ್ತು ‘ಪ್ರಮುಖ‘ವಾದುದು. ಹೆಚ್ಚಿನ ಅವಧಿಗೆ ಮಧ್ಯಂತರ ನಿರ್ದೇಶಕರನ್ನು ನೇಮಕ ಮಾಡುವುದು ಸರಿಯಲ್ಲ. ಯಾಕೆ ಸರ್ಕಾರ ಕಾಯಂ ನಿರ್ದೇಶಕರನ್ನು ನೇಮಿಸಿಲ್ಲ ಎಂದು ಪ್ರಶ್ನಿಸಿದೆ.

ಸಿಬಿಐ ಮುಖ್ಯಸ್ಥರ ನೇಮಕ ಮತ್ತೆ ಮುಂದಕ್ಕೆ
ಸಿಬಿಐಗೆ ನೂತನ ಮುಖ್ಯಸ್ಥರ ನೇಮಕ ಮಾಡುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ನಡೆದ ಆಯ್ಕೆ ಸಮಿತಿ ಸಭೆ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ’ ಎಂದು ತಿಳಿಸಿರುವ ಹಿರಿಯ ಅಧಿಕಾರಿಯು, ಸಭೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

ಸಮಿತಿಯ ಸದಸ್ಯರಾದ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರು ಪ್ರಧಾನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.

ಸಿಬಿಐ ಮುಖ್ಯಸ್ಥರ ನೇಮಕ ವಿಳಂಬವಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ ಸಹ, ಕೂಡಲೇ ನಿರ್ದೇಶಕರನ್ನು ನೇಮಿಸಬೇಕು ಎಂದು ಶುಕ್ರವಾರ ಬೆಳಿಗ್ಗೆ ಸೂಚಿಸಿತ್ತು.ಜನವರಿ 10ರಿಂದ ಸಿಬಿಐ ಮುಖ್ಯಸ್ಥರ ಹುದ್ದೆ ಖಾಲಿ ಇದೆ. ಇದೇ 24 ರಂದು ನಡೆದಿದ್ದ ಸಭೆಯಲ್ಲೂ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.