ಮಮತಾ ಬ್ಯಾನರ್ಜಿ
ಪಿಟಿಐ
ಕೋಲ್ಕತ್ತ: ವಕ್ಫ್ ತಿದ್ದುಪಡಿ ಮಸೂದೆ ಕುರಿತಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ವಕ್ಫ್ ಮಸೂದೆ ಹೆಸರಿನಲ್ಲಿ ಬಿಜೆಪಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ’ ಎಂದು ಆರೋಪಿಸಿದ್ದಾರೆ.
ಮಸೂದೆಯನ್ನು ವಿರೋಧಿಸುವ ನಿರ್ಣಯದ ಮೇಲಿನ ಚರ್ಚೆಯ ವೇಳೆ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ವಕ್ಫ್ ಮಸೂದೆ ಕುರಿತು ಕೇಂದ್ರ ಸರ್ಕಾರವು ನಮ್ಮೊಂದಿಗೆ ಸಮಾಲೋಚಿಸಲೇ ಇಲ್ಲ. ಈ ವಿಷಯದಲ್ಲಿ ಕೇಂದ್ರವು ರಾಜ್ಯ ಸರ್ಕಾರಗಳನ್ನು ಕಡೆಗಣಿಸಿದೆ’ ಎಂದು ದೂರಿದರು.
‘ಜಂಟಿ ಸಂಸದೀಯ ಸಮಿತಿಯಲ್ಲಿ(ಜೆಪಿಸಿ) ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶವೇ ಇರಲಿಲ್ಲ. ಹೀಗಾಗಿ ವಿಪಕ್ಷಗಳು ಜೆಪಿಸಿ ಸಮಿತಿಯನ್ನು ಬಹಿಷ್ಕರಿಸಿದ್ದವು’ ಎಂದು ಹೇಳಿದರು.
‘ವಕ್ಫ್ ಮಸೂದೆಯ ಹೆಸರಿನಲ್ಲಿ ಒಂದೇ ಧರ್ಮವನ್ನು ಯಾಕೆ ಗುರಿಯಾಗಿಸುತ್ತಿದ್ದಾರೆ? ಯಾಕೆ ಮುಸ್ಲಿಮರೇ ಗುರಿಯಾಗುತ್ತಿದ್ದಾರೆ? ವಿವಿಧ ಹಿಂದೂ ದೇವಾಲಯಗಳ ಟ್ರಸ್ಟ್ಗಳು ಮತ್ತು ಚರ್ಚ್ಗಳ ಆಸ್ತಿ ವಿಚಾರವಾಗಿಯೂ ಇದೇ ನಿಲುವು ವ್ಯಕ್ತಪಡಿಸಲು ನಿಮಗೆ(ಬಿಜೆಪಿ) ಧೈರ್ಯವಿದೆಯೇ? ಅದು ನಿಮ್ಮಿಂದ ಸಾಧ್ಯವೇ ಇಲ್ಲ. ಒಂದು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸುವುದು ನಿಮ್ಮ ‘ವಿಭಜಕ’ ಕಾರ್ಯಸೂಚಿಗೆ ಸರಿ ಹೊಂದುತ್ತದೆ’ ಎಂದು ಕಿಡಿಕಾರಿದರು.
‘ಬಿಜೆಪಿಗೆ ಸಂಸತ್ನಲ್ಲಿ ಮೂರನೇ ಎರಡರಷ್ಟು ಬಹುಮತ ಇಲ್ಲ, ಈ ಮಸೂದೆಯನ್ನು ಜಾರಿ ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.