ನವದೆಹಲಿ: ಪೌರತ್ವ ಕುರಿತು ಕೇಂದ್ರ ಸರ್ಕಾರದ ಹೊಸ ಕ್ರಮ ಸಿಎಎಯ ಹಿಂಬಾಗಿಲ ಪ್ರವೇಶವಾಗಿದೆ. ಇದು, ಸರ್ಕಾರದ ಪ್ರತಿಗಾಮಿ ಮನೋಭಾವವನ್ನು ಬಿಂಬಿಸಲಿದೆ ಎಂದು ಎಡಪಕ್ಷಗಳು ಟೀಕಿಸಿವೆ.
ದೇಶದ ಐದು ರಾಜ್ಯಗಳಲ್ಲಿ ನೆಲೆಸಿರುವ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶ ಮೂಲದ ಅಲ್ಪಸಂಖ್ಯಾತ ಸಮುದಾಯದವರಿಂದ ಪೌರತ್ವಕ್ಕಾಗಿ ಕೇಂದ್ರ ಸರ್ಕಾರ ಅರ್ಜಿಯನ್ನು ಆಹ್ವಾನಿಸಿದೆ.
ಈ ಹೆಜ್ಜೆಯು ಸಿಎಎ–2019ರ ಹಿಂಬಾಗಿಲ ಪ್ರವೇಶವಾಗಿದೆ. ಅಲ್ಲದೆ, ಇದು ಕೇಂದ್ರ ಸರ್ಕಾರದ ಪ್ರತಿಗಾಮಿ ವ್ಯಕ್ತಿತ್ವವನ್ನು ಬಿಂಬಿಸಲಿದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಟೀಕಿಸಿದ್ದಾರೆ.
ಸಿಪಿಐ–ಎಂಎಲ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಅವರು, ‘ಸಿಎಎ ನಿಯಮಗಳು ಚಾಲ್ತಿಯಲ್ಲಿ ಇರುವಾಗಲೇ ಇಂತಹ ಅಧಿಸೂಚನೆ ಹೊರಡಿಸುವುದು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಈ ಬಗ್ಗೆ ಗೆಜೆಟ್ನಲ್ಲಿ ಪ್ರಕಟಣೆ ಹೊರಡಿಸಿದ್ದು, ಹಾಲಿ ನಿಯಮಗಳಿಗೆ ತಿದ್ದುಪಡಿ ತಂದು ಗುಜರಾತ್, ಛತ್ತೀಸಗಡ, ರಾಜಸ್ಥಾನ, ಹರಿಯಾಣ, ಪಂಜಾಬ್ ರಾಜ್ಯಗಳ 13 ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಈ ಸಮುದಾಯಗಳವರಿಂದ ಅರ್ಜಿ ಸ್ವೀಕರಿಸಿ, ಪರಿಶೀಲಿಸುವ ವಿಶೇಷಾಧಿಕಾರವನ್ನು ನೀಡಿದೆ.
ಸಿಎಎ–2019 ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇನ್ನೂ ನಿಯಮಗಳನ್ನು ರೂಪಿಸಬೇಕಿದೆ. ಈ ತಿದ್ದುಪಡಿ ಕಾಯ್ದೆಗೆ ವಿವಿಧ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಶುಕ್ರವಾರ ಹೊರಡಿಸಲಾದ ಅಧಿಸೂಚನೆಯಲ್ಲಿ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತ ಸಮುದಾಯಗಳನ್ನು ಪಟ್ಟಿ ಮಾಡಲಾಗಿದೆ. ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬೇಕಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.