ADVERTISEMENT

ಶರಣಾದ ನಕ್ಸಲರಿಗಾಗಿ ಪೊಲೀಸರಿಂದ ಶಾಲೆ

ಪಿಟಿಐ
Published 28 ಜುಲೈ 2019, 20:02 IST
Last Updated 28 ಜುಲೈ 2019, 20:02 IST
   

ರಾಯಪುರ: ಶರಣಾದ ನಕ್ಸಲರಿಗಾಗಿ ಛತ್ತೀಸಗಡದ ನಾರಾಯಣಪುರ ಜಿಲ್ಲೆಯ ಪೊಲೀಸರು ಶಾಲೆಯೊಂದನ್ನು ತೆರೆದಿದ್ದಾರೆ.

‘ನಾರಾಯಣಪುರ ಪಟ್ಟಣದ ಪೊಲೀಸ್‌ ಲೈನ್‌ ಬಡಾವಣೆಯಲ್ಲಿ ತಿಂಗಳ ಹಿಂದೆ ಈ ಶಾಲೆಯನ್ನು ಪ್ರಾರಂಭಿಸಲಾಗಿದೆ. ಮೂವರು ಶಿಕ್ಷಕರಿದ್ದು, 300ಕ್ಕೂ ಅಧಿಕ ಶರಣಾದ ನಕ್ಸಲರಿಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ’ ಎಂದು ನಾರಾಯಣಪುರ ಎಸ್ಪಿ ಮೋಹಿತ್‌ ಗರ್ಗ್ ಹೇಳಿದ್ದಾರೆ.

‘ಹಿಂಸಾಮಾರ್ಗ ಬಿಟ್ಟು ಬಂದಿರುವ ಈ ನಕ್ಸಲರು ಈಗ ಪೊಲೀಸ್‌ ಪಡೆ ಸೇರಿದ್ದಾರೆ. ದಶಕಗಳ ಹಿಂದೆ ನಕ್ಸಲರು ಶಾಲೆಗಳನ್ನು ಧ್ವಂಸ ಮಾಡಿದ್ದರಿಂದ ಕೆಲವರಿಗೆ ಶಿಕ್ಷಣ ಪಡೆಯಲು ಆಗಿಲ್ಲ. ಇನ್ನೂ ಕೆಲವರು ನಕ್ಸಲರ ಗುಂಪು ಸೇರುವ ಸಲುವಾಗಿ ಶಾಲೆಯನ್ನು ಅರ್ಧಕ್ಕೆ ಬಿಟ್ಟಿದ್ದಾರೆ. ಶರಣಾದ ನಂತರ, ಈ ಎಲ್ಲರೂ ವಿದ್ಯಾಭ್ಯಾಸ ಮಾಡುವ ಇಚ್ಛೆ ವ್ಯಕ್ತಪಡಿಸಿದರು’ ಎಂದೂ ಗರ್ಗ್ ಹೇಳಿದ್ದಾರೆ.

ADVERTISEMENT

‘ಶಾಲೆಗೆ ಸೇರಿದವರನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಅಕ್ಷರ ಜ್ಞಾನ ಇಲ್ಲದವರದು ಒಂದು ಗುಂಪಾದರೆ, 5ನೇ ತರಗತಿ ವರೆಗೆ ಓದಿದವರದು ಮತ್ತೊಂದು ಗುಂಪು. 7ನೇ ತರಗತಿ ಉತ್ತೀರ್ಣರಾದವರನ್ನು ಮೂರನೇ ಗುಂಪಿಗೆ ಸೇರಿಸಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.